ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ನಾಳೆಯಿಂದ ಜಗಮಗಿಸಲಿದೆ. ಅಧಿ ದೇವತೆ ಚಾಮುಂಡಿ ತಾಯಿಯು ಕೂಡ ನವರಾತ್ರಿಯ ಸಂಭ್ರಮಕ್ಕೆ ಸಿದ್ದಳಾಗಿದ್ದು, ಚಾಮುಂಡಿಬೆಟ್ಟದಲ್ಲಿ ನವರಾತ್ರಿ ಹಾಗೂ ವಿಜಯದಶಮಿಯ ಹತ್ತು ದಿನಳು ವಿಶೇಷ ಪೂಜಾ ಕೈಂಕರ್ಯಗಳ ನೆರವೇರಿಕೆಗೆ ಸಕಲ ಸಿದ್ದತೆ ನಡೆದಿದೆ. ಇಂದು ಚಾಮುಂಡಿ ಬೆಟ್ಟದಲ್ಲಿ ಉತ್ಸವ ಮೂರ್ತಿಗೆ ಶುದ್ದಿ ಕಾರ್ಯ ಜರುಗಿದ್ದು, ಕೆಂಪುಬಣ್ಣದ ಸೀರೆಯಿಂದ ಚಾಮುಂಡಿ ತಾಯಿಯ ಉತ್ಸವ ಮೂರ್ತಿ ಕಂಗೊಳಿಸಿದೆ. ನವರಾತ್ರಿಯ ಹಿನ್ನೆಲೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಹತ್ತು ದಿನಗಳ ಕಾಲ ವಿಶೇಷ ಪೂಜೆ ನೆರವೇರಿಕೆಯಾಗಲಿದ್ದು, ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ಪ್ರತಿನಿತ್ಯವೂ ವಿವಿಧ ಬಗೆಯ ಅಲಂಕಾರ ಮಾಡಿ ಪೂಜೆ ನೆರವೇರಿಕೆ ಮಾಡಲಾಗುವುದು. ಹಾಗೂ ಚಾಮುಂಡೇಶ್ವರಿ ತಾಯಿಗೆ ಇಷ್ಟವಾದ ತಿನಿಸನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿನಿಯೋಗ ಮಾಡಲಾಗುವುದು.
ಚಾಮುಂಡಿ ತಾಯಿಯ ವಿಶೇಷ ಅಲಂಕಾರಗಳು :
ಅ.3 ಗುರುವಾರ ಬ್ರಾಹ್ಮಿ ಅಲಂಕಾರ
ಅ.4 ಶುಕ್ರವಾರ ಮಹೇಶ್ವರಿ ಅಲಂಕಾರ
ಅ.5 ಶನಿವಾರ ಕೌಮಾರಿ ಅಲಂಕಾರ
ಅ.6 ಭಾನುವಾರ ವೈಷ್ಣವಿ ಅಲಂಕಾರ
ಅ.7 ಸೋಮವಾರ ವರಾಹಿ ಅಲಂಕಾರ
ಅ.8 ಮಂಗಳವಾರ ಇಂದ್ರಾಣಿ ಅಲಂಕಾರ
ಅ.9 ಬುಧವಾರ ಸಿದ್ಧಿಧಾತ್ರಿ ಅಲಂಕಾರ
ಅ. 10 ಗುರುವಾರ ಸರಸ್ವತಿ ಅಲಂಕಾರ ಮತ್ತು ಸಂಜೆ ಕಾಳರಾತ್ರಿ
ಅ.11 ಶುಕ್ರವಾರ ಮಹಾಲಕ್ಷ್ಮೀ ಅಲಂಕಾರ
ಅ.12 ಶನಿವಾರ ಅಶ್ವರೋಹಣ ಅಲಂಕಾರ
ಅ.16 ರ ಬುಧವಾರದಂದು ಚಾಮುಂಡಿಬೆಟ್ಟದ ರಥೋತ್ಸವ ಹಾಗೂ ಅ.18ರ ಶುಕ್ರವಾರದಂದು ತೆಪ್ಪೋತ್ಸವ ಜರುಗಲಿದೆ.
ಪ್ರತಿ ದಿನವೂ ಒಂದೊಂದು ತಿನಿಸು:
ಚಾಮುಂಡೇಶ್ವರಿ ತಾಯಿಗೆ ಇಷ್ಟವಾದ ತಿನಿಸನ್ನು ಪ್ರತಿನಿತ್ಯವೂ ತಯಾರಿಸಿ ಮೊದಲಿಗೆ ತಾಯಿ ಚಾಮುಂಡೇಶ್ವರಿಗೆ ನೈವೆದ್ಯ ಮಾಡಿ, ನಂತರ ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿನಿಯೋಗ ಮಾಡಲಾಗುವುದು.
ಭಾನುವಾರ ಬಿಸಿಬೇಳೆ ಬಾತ್, ಸೋಮವಾರ ಖಾರ ಪೊಂಗಲ್, ಮಂಗಳವಾರ ಪುಳಿಯೋಗರೆ, ಬುಧವಾರ ಉದ್ದಿನ ಅನ್ನ, ಗುರುವಾರ ಬೆಲ್ಲದ ಅನ್ನ ಮತ್ತು ಬುಗರಿ ಕಾಳು, ಶುಕ್ರವಾರ ಕಾಳುಸಾಸಿವೆ ಅನ್ನ ಮತ್ತು ಬುಗರಿ ಕಾಳು, ಶನಿವಾರ ಎಳ್ಳುಹುಳಿ ಅನ್ನವನ್ನು ನೀಡಲು ಸಿದ್ದತೆ ನಡೆಸಲಾಗಿದೆ. ಅಲ್ಲದೆ ನಂದಿನಿ ತುಪ್ಪದಿಂದಲೇ ಮಲೆಮಹದೇಶ್ವರ ರೀತಿಯ ದಿಟ್ಟಂ ಲಡ್ಡು ತಯಾರಿಕೆ ಮಾಡಿ ವಿನಿಯೋಗ ಮಾಡಲಾಗುವುದು.