ಮೈಸೂರು: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್ ಮಹೇಶ್ ಒತ್ತಾಯ ಮಾಡಿದ್ದಾರೆ . ಮೈಸೂರಿನಲ್ಲಿ ಮಾತಾಡಿದ ಎನ್. ಮಹೇಶ್, ಪಕ್ಷದ ವರಿಷ್ಟರು ಯತ್ನಾಳ್ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಯತ್ನಾಳ್ ಅವರ ವಿವಾದಾತ್ಮಕ ಹೇಳಿಕೆಯಿಂದ ಪಕ್ಷದ ಸಂಘಟನಾತ್ಮಕ ವಿಚಾರಗಳಿಗೆ ಧಕ್ಕೆಯಾಗಲಿದೆ.ಯತ್ನಾಳ್ ಹೇಳಿಕೆ ವಿಚಿತ್ರ, ವಿಪರ್ಯಾಸ ಹಾಗೂ ಅಹಂಕಾರದಿಂದ ಕೂಡಿದೆ. ಪಕ್ಷದ ಸದಸ್ಯತ್ವ ಅಭಿಯಾನ ನಡೆಯುತ್ತಿರುವ ವೇಳೆಯಲ್ಲೇ ಯತ್ನಾಳ್ ಪದೇ ಪದೇ ಮಾತನಾಡಬಾರದು.ಏನೇ ಭಿನ್ನಾಭಿಪ್ರಾಯವಿದ್ದರೂ ಕೇಂದ್ರ, ರಾಜ್ಯ ನಾಯಕರ ಜೊತೆ ಬಗೆಹರಿಸಿಕೊಳ್ಳಲಿ. ವಿಜಯೇಂದ್ರ ಅವರನ್ನು ಅಳೆದು ತೂಗಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಯತ್ನಾಳ್ ಅವರ ಹೇಳಿಕೆಗಳು ಇದೇ ರೀತಿ ಮುಂದುವರಿದರೆ ಕಾರ್ಯಕರ್ತರಲ್ಲಿ ನಿರುತ್ಸಾಹ ಉಂಟಾಗಲಿದೆ. ಯತ್ನಾಳ್ ವರ್ತನೆ ಇದೇ ರೀತಿ ಮುಂದುವರಿದರೆ ಪಕ್ಷದ ವರಿಷ್ಠರು ಕ್ರಮ ತೆಗೆದುಕೊಳ್ಳಬೇಕು. ಇದು ಯತ್ನಾಳ್ ರೀತಿ ವರ್ತಿಸುವ ಎಲ್ಲರಿಗೂ ಅನ್ವಯವಾಗಲಿದೆ. ನಾನು ರಾಜ್ಯದ ಉಪಾಧ್ಯಕ್ಷನಾಗಿದ್ದು, ಅವರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ವರಿಷ್ಠರಿಗೆ ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವ ಎನ್ ಮಹೇಶ್ ಹೇಳಿದ್ರು.