ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವಪ್ರಸಿದ್ಧ ದಸರಾ ಮಹೋತ್ಸವ ಸಂಭ್ರಮ, ಸಡಗರ ಕಳೆಕಟ್ಟಿದ್ದು, ನಗರದ ಪ್ರಮುಖ ಧಾರ್ಮಿಕ ಕೇಂದ್ರ ಚಾಮುಂಡಿಬೆಟ್ಟದಲ್ಲಿ ಗುರುವಾರ 2024ನೇ ಸಾಲಿನ ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.
ದಸರಾ ಉದ್ಘಾಟನೆ: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. 2024ರ ದಸರಾ ಉದ್ಘಾಟನೆಯನ್ನು ಖ್ಯಾತ ಸಾಹಿತಿ ಹಂ ಪಾ ನಾಗರಾಜಯ್ಯ ನೆರವೇರಿಸಲಿದ್ದು, ನಾಳೆ ಅ.3ರ ಬೆಳಿಗ್ಗೆ 9.15 ರಿಂದ 9.40ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ಉದ್ಘಾಟನೆ ಮಾಡಲಿದ್ದಾರೆ. ನಾಡದೇವಿಯ ಅಗ್ರಪೂಜೆಯೊಂದಿಗೆ ದಸರಾ ಉದ್ಘಾಟನೆಯಾಗಲಿದೆ.
ದಸರಾ ಚಲನಚಿತ್ರೋತ್ಸವ: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಚಲನಚಿತ್ರೋತ್ಸವವನ್ನು ಉದ್ಘಾಟಿಸುವರು.
ದಸರಾ ಆಹಾರ ಮೇಳ: ಈ ಬಾರಿಯ ದಸರಾ ಆಹಾರ ಮೇಳವನ್ನು ಸ್ಕೌಟ್ಸ್&ಗೈಡ್ಸ್ ಮೈದಾನದಿಂದ ಮಹಾರಾಜ ಕಾಲೇಜು ಮೈದಾನಕ್ಕೆ ಸ್ಥಳಾಂತರಗೊಳಿಸಿದ್ದು, ಬೆಳಿಗ್ಗೆ 111.30ಕ್ಕೆ ಆಹಾರ,ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ ಎಚ್ ಮುನಿಯಪ್ಪ ಮಹಾರಾಜ ಕಾಲೇಜು ಮೈದಾನದಲ್ಲಿ ಉದ್ಘಾಟಿಸುವರು.
ದಸರಾ ಫಲಪುಷ್ಪ ಪ್ರದರ್ಶನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮದ್ಯಾಹ್ನ 12.30ಕ್ಕೆ ಕುಪ್ಪಣ್ಣ ಪಾರ್ಕ್( ನಿಶಾದ್ ಬಾಗ್) ನಲ್ಲಿ ದಸರಾ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟನೆ ಮಾಡುವರು.
ದಸರಾ ಕುಸ್ತಿ ಪಂದ್ಯಾವಳಿ: ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇವರಾಜು ಅರಸು ವಿವಿಧೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟನೆ ಮಾಡುವರು.
ಶಿಲ್ಪಕಲೆ ಮತ್ತು ಚಿತ್ರಕಲಾ ಪ್ರದರ್ಶನ: ಸಂಜೆ 4 ಗಂಟೆಗೆ ಸಿದ್ದಾರ್ಥ ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಶಿಲ್ಪಕಲೆ ಮತ್ತು ಚಿತ್ರಕಲಾ ಶಿಬಿರದಲ್ಲಿ ರಚಿಸಲಾದ ಕಲಾ ಕೃತಿಗಳ ಪ್ರದರ್ಶನ, ಲಲಿತ ಕಲೆ, ಕರಕುಶಲ ಕಲೆಗಳ ಕಲಾಕೃತಿ ಪ್ರದರ್ಶನ ರಾಷ್ಟ್ರ ಮಟ್ಟದ ಕರಕುಶಲ ಕಲೆಗಳ ಪ್ರದರ್ಶನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ಉದ್ಘಾಟಿಸಲಿದ್ದಾರೆ.
ದಸರಾ ಸಿಎಂ ಕಪ್ ಕ್ರೀಡಾಕೂಟ: ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಜೆ 4.30ಕ್ಕೆ ಉದ್ಘಾಟನೆ ಮಾಡುವರು.
ಪುಸ್ತಕ ಮೇಳ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಈ ಬಾರಿಯ ದಸರಾ ಪುಸ್ತಕ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ಅವರು ಸಂಜೆ 5 ಗಂಟೆಗೆ ಉದ್ಘಾಟನೆ ಮಾಡಲಿರುವರು.
ನವರಾತ್ರಿ ಜಾನಪದ ರಂಗ ಉತ್ಸವ: ರಂಗಮಂದಿರದ ರಂಗಾಯಣ ಭೂಮಿಗೀತದಲ್ಲಿ ಆಯೋಜಿಸಿರುವ ನವರಾತ್ರಿ ಜಾನಪದ ರಂಗ ಉತ್ಸವವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ಅವರು ಸಂಜೆ 5.30ಕ್ಕೆ ಉದ್ಘಾಟನೆ ಮಾಡಲಿರುವರು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ: ದಸರಾ ಕಾರ್ಯಕ್ರಮಗಳ ಕೇಂದ್ರ ಬಿಂದುವಾಗಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರಮನೆ ಆವರಣದಲ್ಲಿ ಉದ್ಘಾಟನೆ ಮಾಡಲಿದ್ದು, ಇದೇ ವೇದಿಕೆಯಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಪ್ರಧಾನ ಮಾಡುವರು. ಈ ಬಾರಿಯ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯು ಹಾವೇರಿ ಜಿಲ್ಲೆಯ ಖ್ಯಾತ ಶಹನಾಯಿ ವಾದಕ ಪಂಡಿತ್ ಬಸವರಾಜ ಭಜಂತ್ರಿ ಗೆ ಸಲ್ಲಲಿದೆ.
ವಿದ್ಯುತ್ ದೀಪಾಲಂಕಾರ: ದಸರಾ ವಿದ್ಯುತ್ ದೀಪಾಲಂಕಾರ ಹಾಗೂ ದೀಪಾಲಂಕಾರಗೊಂಡಿರುವ “ವಿದ್ಯುತ್ ರಥ”ದ ಚಾಲನೆಯನ್ನು ಇಂಧನ ಸಚಿವರಾದ ಕೆ.ಜೆ,.ಜಾರ್ಜ್ ಅವರು ನೆರವೇರಿಸುವರು. ನ್ಯೂ ಸಯ್ಯಾಜಿರಾವ್ ರಸ್ತೆಯ ಹಸಿರು ಮಂಟಪದಲ್ಲಿ ಸಂಜೆ 6.30 ಕ್ಕೆ ಚಾಲನೆ ಮಾಡಲಾಗುವುದು.
ವಸ್ತು ಪ್ರದರ್ಶನ: ಸಿಎಂ ಸಿದ್ದರಾಮಯ್ಯನವರು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸಂಜೆ 7.30ಕ್ಕೆ ಈ ಬಾರಿಯ ದಸರಾ ವಸ್ತು ಪ್ರದರ್ಶನವನ್ನು ಉದ್ಘಾಟನೆ ಮಾಡುವರು.
ಒಟ್ಟಾರೆ 10 ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರು ಜಗಮಗಿಸಲಿದ್ದು, ದೇಶ ವಿದೇಶ, ಹೊರರಾಜ್ಯಗಳಿಂದ ಬರುವ ಪ್ರವಾಸಿಗರ ಕಣ್ಣಿಗೆ ರಸದೌತಣವನ್ನು ಬಡಿಸಲಿದೆ.