ಶಾಸಕ ದರ್ಶನ್ ಧ್ರುವನಾರಾಯಣ್ ಅಭಿಪ್ರಾಯ
ಪ್ರತಿನಿಧಿ ವರದಿ ನಂಜನಗೂಡು
ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ಪ್ರವಾಸಿಗರ ಕರ್ತವ್ಯವಾಗಿರುತ್ತದೆ ಹಾಗೂ ಸ್ವಚ್ಛತೆ ಎಲ್ಲರ ಜವಾಬ್ದಾರಿಯಾಗಿರುತ್ತದೆ ಎಂದು ಶಾಸಕ ದರ್ಶನ್ ದೃವನಾರಾಯಣ್ ತಿಳಿಸಿದರು.
ನಂಜನಗೂಡು ನಗರದಲ್ಲಿರುವ ಶ್ರೀ ನಂಜುಂಡೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವ ಜೀವನ ಸಮಿತಿ ಮತ್ತು ತಾಲೂಕಿನ ವಿವಿಧ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 155ನೇ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಕಪಿಲಾ ನದಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡು ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ಕ್ಷೇತ್ರ ಕೂಡ ಹೌದು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರು ಮತ್ತು ಭಕ್ತದಿಗಳು ಈ ಕ್ಷೇತ್ರದ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು. ಇದು ಪ್ರವಾಸಿಗರ ಆದ್ಯ ಕರ್ತವ್ಯವಾಗಿರುತ್ತದೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಹಾತ್ಮ ಗಾಂಧೀಜಿಯವರ ಹುಟ್ಟು ಹಬ್ಬದ ಹಿನ್ನೆಲೆ ಉತ್ತಮ ಕಾರ್ಯವನ್ನು ಹಮ್ಮಿಕೊಂಡಿದ್ದು, ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ, ಇದು ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಇಂತಹ ಕಾರ್ಯಕ್ರಮಗಳು ಹೆಚ್ಚು-ಹೆಚ್ಚು ನಡೆಯಬೇಕು. ಇಂತಹ ಒಂದು ಪುಣ್ಯದ ಕಾರ್ಯಕ್ರಮದಲ್ಲಿ ನನಗೂ ಅವಕಾಶ ನೀಡಿದ್ದು ಬಹಳ ಸಂತಸ ತಂದಿದೆ ಎಂದು ತಿಳಿಸಿದರು.
ಟಿ.ಜಯರಾಮ್ ಮಾತನಾಡಿ, ನೆಲ್ಲಿತ್ತಾಯ ಧರ್ಮಸ್ಥಳದಲ್ಲಿಯೂ ಸಹ ಪೂಜ್ಯ ಕಾವಂತರು ವರ್ಷಕ್ಕೆ ನಾಲ್ಕೈದು ಬಾರಿ ನೇತ್ರಾವತಿ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಅಲ್ಲಿಯೂ ಸಹ ಶಬರಿಮಲೆಯಿಂದ ಬರುವ ಶಬರಿಮಲೆ ಯಾತ್ರೆಗಳು ತಮ್ಮ ಮಾಲೆ ಹಾಗೂ ಪಂಚೆಗಳನ್ನು ನದಿಯಲ್ಲಿ ಬಿಟ್ಟು ಹೋಗುತ್ತಾರೆ. ನೀರನ್ನು ಉಳಿಸಿ ನೀರಿನ ಸ್ವಚ್ಛತೆ ಕಾಪಾಡೂಣ್ಣ ಎಂದರು.
ಜೆಎಸ್ಎಸ್ ಕಾಲೇಜಿನ ಎನ್ಸಿಸಿ ಮತ್ತು ಎನ್ಎಸ್ಎಸ್ ವಿದ್ಯಾರ್ಥಿಗಳು, ಶ್ರೀಕಂಠೇಶ್ವರ ಧೋನಿ ವಿಹಾರ ಸಂಘ ಸೇರಿದಂತೆ ಹಲವು ಸಂಸ್ಥೆಯ ಕಾರ್ಯಕರ್ತರು ಶ್ರೀ ನಂಜುಂಡೇಶ್ವರ ದೇವಸ್ಥಾನ ಮತ್ತು ಕಪಿಲಾ ನದಿಯ ಸ್ನಾನಘಟ್ಟದಲ್ಲಿದ್ದ ಭಕ್ತರು ಬಿಸಾಡಿ ಹೋಗಿರುವ ಬಟ್ಟೆಗಳು ಪ್ಲಾಸ್ಟಿಕ್ ವಸ್ತುಗಳನ್ನು ಸ್ವಚ್ಛಗೊಳಿಸಿದರು.
ನಗರಸಭಾಧ್ಯಕ್ಷ ಶ್ರೀಕಂಠ ಸ್ವಾಮಿ, ಮುಖಂಡ ಮಂಜುನಾಥ್, ದೇವಾಲಯದ ಕಾರ್ಯನಿರ್ವಾಧಿಕಾರಿ ಜಗದೀಶ್ ಕುಮಾರ್, ಧರ್ಮಸ್ಥಳ ಸಂಸ್ಥೆಯ ಧರ್ಮರಾಜ್, ಅನುರಾಗ ಟ್ರಸ್ಟ್ ನ ಬಸವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.