ಮೈಸೂರು: ನಾಡಿನ ಜನತೆಯ ಸೇವೆ ಮಾಡ್ತಿದ್ದೇನೆ, ತಪ್ಪು ಮಾಡಿದ್ದರೆ ಇಷ್ಟು ದಿನ ಜನ ನನ್ನನ್ನು ಒಪ್ಪುತ್ತಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿ ಮಾಡಿ ಪಾರದರ್ಶಕ ಆಡಳಿತ ಕೊಡುತ್ತಿದೆ. ಇದನ್ನ ಸಹಿಸಲಾಗದೆ ಕೆಲವರು ಅಪಪ್ರಚಾರ ಮಾಡ್ತಿದ್ದಾರೆ. ಇನ್ನೊಂದು ವರ್ಷ.. ಇನ್ನೊಂದೇ ವರ್ಷ ಜನರ ಸೇವೆ ಮಾಡೋಕೆ ಚಾಮುಂಡೇಶ್ವರಿ ಅವಕಾಶ ಮಾಡಿಕೊಡಲಿ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ದಸರಾ ಉದ್ಘಾಟನೆ ಬಳಿಕ ವೇದಿಕೆಯ ಭಾಷಣದಲ್ಲಿ ಹೇಳಿದ್ದಾರೆ.
1 ವರ್ಷ ಅವಕಾಶ ಕೊಡಲಿ..!
ಮುಂದಿನ 1 ವರ್ಷ ತಾಯಿ ಚಾಮುಂಡೇಶ್ವರಿ ಸೇವೆ ಮಾಡೋಕೆ ಅವಕಾಶ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿರೋದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕೈ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಎದ್ದಿದ ಪುಕಾರಿಗೆ ಈಗ ಮತ್ತೆ ಬಲಬಂದಿದೆ. ಸಿಎಂ ಪ್ರಮಾನವಚನಕ್ಕೂ ಮುನ್ನ ಅಧಿಕಾರ ಹಂಚಿಕೆಯಾಗಿದೆ ಎಂಬ ಮಾತು ಕೇಳಿಬಂದಿತ್ತು. ಸಿಎಂ ಸಿದ್ದರಾಮಯ್ಯ ಗೆ 2.5 ವರ್ಷ ಹಾಗೂ ಡಿಕೆಶಿ ಅವರಿಗೆ 2.5 ಅಧಿಕಾರ ಎಂದು ಹೇಳಲಾಗ್ತಿತ್ತು. ಮುಂದಿನ ವರ್ಷ ದಸರೆಗೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ 2.5 ವರ್ಷ ಮುಗಿಯಲಿದ್ದು , ಭಾವನಾತ್ಮಕವಾಗಿ ಸಿಎಂ ಇನ್ನೊಂದು ವರ್ಷ ಅವಕಾಶ ಕೊಡಲಿ ಎಂದು ಭಾಷಣ ಮಾಡಿರೋದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಸದ್ಯ ಮುಡಾ ಪ್ರಕರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ಹಾಗೂ ಇಡಿ ಭಯದಲ್ಲಿ ಒದ್ದಾಡುತ್ತಿದ್ದಾರೆ. ಈ ಮಧ್ಯೆಯೇ ಕೊಂಚ ಭಾವನಾತ್ಮಕ ಭಾಷಣ ಮಾಡಿರೋದು ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ ದಸರಾ ಎಂದರೆ ಮೈಸೂರು ಜನರಿಗೆ ಹರ್ಷ, ಉಲ್ಲಾಸ. ಕರ್ನಾಟಕ ಕಂಡಂತಹ ಅಪರೂಪದ ಸಾಹಿತಿ ಹಂಪನಾ ಅವರು ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೆ ಹಂಪನಾ ಮತ್ತು ಕಮಲ ಹಂಪನಾ ಜೋಡಿ ಮಾದರಿಯಾದ ಜೋಡಿ. ಹಂಪನಾ ಅವರಿಂದ ದಸರಾ ಉದ್ಘಾಟನೆ ಆದದ್ದು ಸಂತಸವಾಗಿದೆ. ಚುನಾಯಿತ ಸರ್ಕಾರಗಳನ್ನು ವಾಮಮಾರ್ಗದಿಂದ ಕಿತ್ತೊಗೆಯುವುದು ತಪ್ಪು ಎಂದು ಹಂಪನಾ ಹೇಳಿರುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಬಹಳ ಮಹತ್ವಪೂರ್ಣವಾದದ್ದು. ಐದು ವರ್ಷ ಕಾಲ ಅಭಿವೃದ್ಧಿ ಮಾಡೇ ಮಾಡ್ತೀವಿ.
ದೇವರಾಜ ಅರಸು ಬಿಟ್ಟರೆ ಐದು ವರ್ಷ ಪೂರ್ಣ ಅಧಿಕಾರ ಮಾಡಿದ್ದು ಈ ಸಿದ್ದರಾಮಯ್ಯ ಮಾತ್ರ. ತಾಯಿ ಚಾಮುಂಡಿ ಆಶೀರ್ವಾದ ನನ್ನ ಮೇಲೆ ಇದೆ ಎಂದಿದ್ದಾರೆ. ಜಿಟಿಡಿ ಬೇರೆ ಪಕ್ಷದಲ್ಲಿ ಇದ್ದರೂ ಸತ್ಯದ ಮಾತು ಹೇಳಿದ್ದಾರೆ. ಸತ್ಯ ಮೇವ ಜಯತೆ, ಸತ್ಯಕ್ಕೆ ಯಾವಾಗಲೂ ಜಯ ಸಲ್ಲುತ್ತೆ.ಜನರ ಆಶೀರ್ವಾದ ಸರ್ಕಾರದ ಮೇಲೆ ನನ್ನ ಮೇಲೆ ಇರುವವರೆಗೂ ನನ್ನನ್ನು ಯಾರು ಏನು ಮಾಡಲು ಆಗೋದಿಲ್ಲ. ನಾನು ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಇಷ್ಟು ಸುಧೀರ್ಘ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ಇಂದಿನ ಜಿಟಿಡಿ ಮಾತಿನಿಂದ ನನಗೆ ಹೆಚ್ಚು ಬಲ ಬಂದಿದೆ ಜಿಟಿಡಿಗೆ ನನ್ನ ಧನ್ಯವಾದ ಎಂದಿದ್ದಾರೆ.