ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ 2024ರ ಮೂರನೇ ದಿನವಾದ ಇಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಪಾರಂಪರಿಕ ಟಾಂಗಾ ಸವಾರಿ ಆಯೋಜನೆ ಮಾಡಲಾಗಿತ್ತು. ಮೈಸೂರಿನ ಪರಂಪರೆಯನ್ನು ಸಾರುವ ಟಾಂಗಾ ಸವಾರಿಯಲ್ಲಿ 40 ಕ್ಕೂ ಹೆಚ್ಚು ದಂಪತಿಗಳು ಪಾಲ್ಗೊಂಡಿದ್ದರು.ನಾನಾ ಜಿಲ್ಲೆಗಳಿಂದ ಆಗಮಿಸಿದಂತಹ ದಂಪತಿಗಳು ಮುಂಜಾನೆಯ ತುಂತುರು ಮಳೆಯಲ್ಲೂ ತಮ್ಮ ವಿವಿಧ ಪ್ರಕಾರದ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ನೆರೆದಿದ್ದಂತಹ ಜನರ ಕಣ್ಮನ ಸೆಳೆದರು.
ನಗರದ ರಂಗಚಾರ್ಲು ಪುರಭವನದ ಆವರಣದಲ್ಲಿ (ಟೌನ್ ಹಾಲ್ ) ನಡೆದ ಕಾರ್ಯಕ್ರಮದಲ್ಲಿ ದಂಪತಿಗಳಿಗೆ ಭಾಗಿನ ಕೊಡುವ ಮೂಲಕ ಚಾಲನೆ ನೀಡಲಾಯ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಡಾ.ಎನ್ .ಎಸ್ ರಂಗಾರಾಜು ಮತ್ತು ಇತಿಹಾಸ ಪ್ರಾಧ್ಯಾಪಕರಾದ ಡಾ.ಲ.ನ ಸ್ವಾಮಿಯವರು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ದಂಪತಿಗಳಿಗೆ ಮೈಸೂರು ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜು ಎ ಅವರು ಮಾತನಾಡಿ, ಸಾಮೂಹಿಕ ವಿವಾಹವನ್ನು ಏರ್ಪಾಡು ಮಾಡಿರುವ ರೀತಿಯಲ್ಲಿ ವೇದಿಕೆಯು ಕಂಗೊಳಿಸುತ್ತಿದೆ. ನೂತನ ದಂಪತಿಗಳಂತೆ ಎಲ್ಲಾ ಜೋಡಿಗಳು ಜನರನ್ನು ಆಕರ್ಷಿಸುತ್ತಿದ್ದು, ತುಂತುರು ಹನಿಯ ನಡುವೆಯೂ ಸುಂದರವಾದ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ ಎಂದರು.ನಮ್ಮ ಇಲಾಖೆಯು ಪರಂಪರೆಯನ್ನು ಸಂರಕ್ಷಿಸಿ, ರಕ್ಷಿಸಿ ಅದನ್ನು ಮುಂದಿನ ಪೀಳಿಗೆಗೆ ರವಾನಿಸುವಂತಹ ಕೆಲಸವನ್ನು ಮಾಡುತ್ತಿದೆ. ಸಂಸ್ಕೃತಿಯನ್ನು ಪ್ರಚಲಿತಗೊಳಿಸಿ , ಹೆಚ್ಚು ಜನರಿಗೆ ತಲುಪಿಸುವ ಮೂಲಕ ಅದನ್ನು ಕಾಪಾಡಬೇಕಾಗಿದೆ ಎಂದರು.ಮೈಸೂರಿನ ಮಹಾರಾಜರು ಇಂದಿಗೂ ಕೂಡ ಟಾಂಗಾ ಸವಾರಿಯನ್ನು ಬಳಸುವುದರಿಂದ ಮೈಸೂರು ಎಂದರೆ ಟಾಂಗಾ, ಟಾಂಗಾ ಎಂದರೆ ಮೈಸೂರು ಎಂಬ ಪ್ರತೀತಿ ಇದೆ. ಮೈಸೂರಿಗೆ ಆಗಮಿಸುವಂತಹ ಪ್ರವಾಸಿಗರು ಟಾಂಗಾ ಸವಾರಿಯನ್ನು ಮಾಡದೆ ಹಿಂತಿರುಗುವುದಿಲ್ಲ, ಹಾಗಾಗಿ ಸಾಂಪ್ರದಾಯಿಕ ಉಡುಗೆ ಮತ್ತು ಟಾಂಗಾ ಸವಾರಿ ಇವೆರಡನ್ನು ಒಂದುಗೂಡಿಸಿ ಪಾರಂಪರಿಕ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.
40 ಕ್ಕೂ ಹೆಚ್ಚು ಜೋಡಿಗಳು ಭಾಗಿ
ಟಾಂಗಾ ಸವಾರಿಯಲ್ಲಿ ಮೈಸೂರು, ಶಿವಮೊಗ್ಗ, ಹಾಸನ, ಬೆಂಗಳೂರು ಹಾಗೂ ಇನ್ನಿತರೆ ಜಿಲ್ಲೆಗಳಿಂದ ನೋಂದಾಯಿತ ದಂಪತಿಗಳು ಭಾಗವಹಿಸಿದ್ದು, ಆಯಾ ಜಿಲ್ಲೆಗಳ ಸಾಂಪ್ರದಾಯಿಕ ಉಡುಗೆಯ ಮೂಲಕ ಕಣ್ಮನ ಸೆಳೆದರು. ಕೊಡಗು, ಮೈಸೂರಿನ ಪಾರಂಪಾರಿಕ ಉಡುಗೆ ತೊಟ್ಟ ದಂಪತಿಗಳು, ಮೈಸೂರು ಪೇಠ ರೇಷ್ಮೆ ಸೀರೆ ತೊಟ್ಟ ದಂಪತಿಗಳು ಹಾಗೂ ಕಿರಿಯ ವಯಸ್ಸಿನಿಂದ ಹಿರಿಯ ವಯಸ್ಸಿನ ಜೋಡಿಗಳು ಭಾಗಿಯಾಗಿ ಜನರ ಗಮನವನ್ನು ತಮ್ಮತ್ತ ಸೆಳೆದುಕೊಂಡರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಂಪತಿಗಳು 25 ಟಾಂಗಾ ಗಾಡಿಗಳಲ್ಲಿ ನಗರದ ಐತಿಹಾಸಿಕ ರಸ್ತೆಗಳಲ್ಲಿ ಸಾಗಿದರು. ಪುರಭವನದಿಂದ ಹೊರಟ ಸವಾರಿ ದೊಡ್ಡಗಡಿಯಾರ, ಚಾಮರಾಜ ಒಡೆಯರ್ ವೃತ್ತ, ಕೃಷ್ಣರಾಜ ವೃತ್ತ, ಜಗನ್ ಮೋಹನ ಅರಮನೆ, ಹಳೆ ಡಿಸಿ ಆಫೀಸ್, ಗಾಂಧಿವೃತ್ತದ ಮೂಲಕ ಸಾಗಿ ಮತ್ತೆ ಪುರಭವನದಲ್ಲಿ ಮುಕ್ತಾಯಗೊಂಡಿತು. ಈ ವೇಳೆ ನೆರೆದಿದ್ದ ಜನರು ಈ ವೀಶೇಷ ಸವಾರಿಯನ್ನು ಕಣ್ತುಂಬಿ ಕೊಂಡರು.