ಸಕಲೇಶಪುರ: ಹೇಮಾವತಿ ನದಿ ದಂಡೆ ಸಮೀಪ ಅಕ್ರಮವಾಗಿ ನಿರ್ಮಾಣ ಮಾಡಿದ್ದ ತಡೆಗೋಡೆಯನ್ನು ತಾಲೂಕು ಆಡಳಿತ ಮಂಡಳಿ ಇಂದು ಮುಂಜಾನೆ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ತೆರವುಗೊಳಿಸಿದೆ.
ನಗರದ ಶ್ರೀನಿವಾಸ ಕನ್ವೆಷನ್ ಹಾಲ್ ಮಾಲೀಕರಾದ ಶ್ರೀನಿವಾಸ್(ಪಲ್ಲವಿ) ಅವರು ಹೇಮಾವತಿ ನದಿ ದಂಡೆ ಸಮೀಪ ಅಕ್ರಮವಾಗಿ ತಡೆಗೋಡೆಯನ್ನು ನಿರ್ಮಿಸಿದ್ದರು. ಈ ಕುರಿತು ಕೆಲ ಸಂಘ ಸಂಸ್ಥೆಗಳ ಮುಖಂಡರು ಆರೋಪ ಮಾಡಿ ತಡೆಗೋಡೆ ತೆರವು ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಇಂದು ಕಾರ್ಯಪ್ರವೃತ್ತರಾದ ತಾಲೂಕು ಆಡಳಿತ ಬೆಳಿಗ್ಗೆ ಜೆಸಿಬಿ ಯಂತ್ರದ ಮೂಲಕ ಉಪ ವಿಭಾಗಾಧಿಕಾರಿ ಶೃತಿ ಮಾರ್ಗದರ್ಶನದಲ್ಲಿ ಬೃಹತ್ ತಡೆ ಗೋಡೆಯನ್ನು ತೆರವುಗೊಳಿಸಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ಕೂಡ ನಿಯೋಜನೆ ಮಾಡಲಾಗಿತ್ತು.