ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ಮಧ್ಯಾಹ್ನ ದರ್ಶನ್ ಮತ್ತು ಪವಿತ್ರ ಗೌಡ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ತಮ್ಮ ನೆಚ್ಚಿನ ನಟನಿಗೆ ಜಾಮೀನು ಸಿಗಲಿರುವ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ.
ಶುಕ್ರವಾರ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಪ್ರಬಲವಾಗಿ ವಾದಿಸಿ ಪೊಲೀಸರ ತನಿಖೆಯ ವೈಖರಿಯನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಪ್ರತಿ ಹಂತದಲ್ಲೂ ದರ್ಶನ್ ವಿರುದ್ಧ ಸಾಂದರ್ಭಿಕ ಸಾಕ್ಷ್ಯಗಳನ್ನು ಸೃಷ್ಟಿಸುತ್ತಾ ಬರಲಾಗಿದ್ದು ತಮ್ಮ ಕಕ್ಷಿದಾರರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗಿದೆ ಎಂದು ನ್ಯಾಯಪೀಠದ ಮುಂದೆ ವಾದಿಸಿದರು. ಇದಕ್ಕೆ ಪಿಪಿ ಕೂಡ ಪ್ರಬಲ ಪ್ರತಿವಾದ ಮಂಡಿಸಿದ್ದಾರೆ . ಅಂತಿಮವಾಗಿ ನ್ಯಾಯಾಧೀಶರು ಇವತ್ತು ಆದೇಶ ನೀಡಲಿದ್ದಾರೆ. ಈ ಕೊಲೆ ಪ್ರಕರಣದ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆಯೂ ಇವತ್ತು ನಡೆಯಲಿದೆ. ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ 17 ಆರೋಪಿಗಳ ಪೈಕಿ 15, 16 ಮತ್ತು 17ನೇ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಒಟ್ನಲ್ಲಿ ಅಭಿಮಾನಿಗಳು ತೀವ್ರ ಕುತೂಹಲದಿಂದ ಈ ದಿನವನ್ನ ಎದುರು ನೋಡುತ್ತಿದ್ದು ಡಿ ಬಾಸ್ ಆಗಮನದ ಶುಭಸುದ್ದಿ ಕೇಳೋಕೆ ಕಾತುರರಾಗಿದ್ದಾರೆ.