ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ 2024ರ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕೇವಲ ಐದು ದಿನ ಮಾತ್ರ ಬಾಕಿ ಉಳಿದಿದೆ. ಜಂಬೂ ಸವಾರಿಯ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಜಂಬೂಸವಾರಿ ಮೆರವಣಿಗೆಯ ಕೇಂದ್ರಬಿಂದುವಾದ ದಸರಾ ಗಜಪಡೆಯ ಆನೆಗಳಿಗೆ ಅರಣ್ಯ ಇಲಾಖೆ ಜವಾಬ್ದಾರಿ ಹಂಚಿಕೆ ಮಾಡಿದೆ.
ಮೈಸೂರಿನಲ್ಲಿಂದು ದಸರಾ ಗಜಪಡೆಯ ಆನೆಗಳ ಜವಾಬ್ದಾರಿ ಹಂಚಿಕೆ ಕುರಿತು ಮಾತನಾಡಿದ ಡಿಸಿಎಫ್ ಡಾ ಐ ಬಿ ಪ್ರಭುಗೌಡ , ಈ ಬಾರಿಯ ವಿಜಯದಶಮಿ ಜಂಬೂಸವಾರಿ ಮೆರವಣೆಯನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಧನಂಜಯನಿಗೆ ವಹಿಸಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಎಲ್ಲರಿಗಿಂತ ಮುಂಚೂಣಿಯಲ್ಲಿ ಸಾಗುವ ಮೂಲಕ ಧನಂಜಯ ಜಂಬೂಸವಾರಿ ಮೆರವಣಿಗೆಯನ್ನು ಮುನ್ನಡೆಸಲಿದ್ದಾನೆ. ಕಳೆದ ವರ್ಷದ ದಸರಾದಲ್ಲಿ ನಿಶಾನೆ ಆನೆಯಾಗಿ ಮೆರವಣಿಗೆ ಮುನ್ನಡೆಸಿದ್ದ ಅರ್ಜುನನ ಅಕಾಲಿಕ ಸಾವಿನಿಂದ ನಿಶಾನೆ ಆನೆ ಆಯ್ಕೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತಲೆಬಿಸಿ ಮಾಡಿಕೊಂಡಿದ್ದರು. ಆದರೀಗ ತುಂಬಾ ಅಳೆದು ತೂಗಿ ಧನಂಜಯನನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ ಜಂಬೂಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯುವಿನ ಎಡಬಲದಲ್ಲಿ ಹಿರಣ್ಯ ಹಾಗು ಲಕ್ಷ್ಮಿ ಕುಮ್ಕಿ ಆನೆಗಳಾಗಿ ಅಭಿಮನ್ಯುವಿಗೆ ಸಾಥ್ ನೀಡಲಿವೆ. ನೌಫತ್ ಆನೆಯಾಗಿ ಗೋಪಿ ಆನೆಯನ್ನು ಆಯ್ಕೆಮಾಡಲಾಗಿದೆ. ಒಟ್ಟಾರೆ 9 ಆನೆಗಳು ಜಂಬೂಸವಾರಿಯಲ್ಲಿ ಭಾಗಿಯಾಗಲಿದ್ದು, ಇನ್ನು ಉಳಿದ ಆನೆಗಳು ಭಾಗಿಯಾಗುವುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇನ್ನು ಶ್ರೀರಂಗಪಟ್ಟಣ ದಸರಾದಲ್ಲಿ ಲಕ್ಷ್ಮಿ ಆನೆ ವಿಚಲಿತಗೊಂಡ ವಿಚಾರವಾಗಿ ಮಾತನಾಡಿ, ಲಕ್ಷ್ಮಿ ಆನೆ ವಾಪಸ್ ಕರೆದುಕೊಂಡು ಹೋಗುತ್ತಾರೆ ಎಂಬ ಕಾರಣಕ್ಕೆ ಕೆಲ ಕಾಲ ಲಾರಿಯೇರಲು ಹಿಂದೇಟು ಹಾಕಿತು.
ಬಳಿಕ ನಮ್ಮ ಮಾವುತರು ಕಾವಾಡಿಗರು ಲಾರಿ ಅತ್ತಿಸುವ ಕೆಲಸಕ್ಕೆ ಮುಂದಾದರು. ಅದಕ್ಕೂ ಮುಂಚೆ 3 ಗಂಟೆ ಅಂಬಾರಿ ಆನೆ ಜೊತೆ ಲಕ್ಷಾಂತರ ಜನರ ನಡುವೆ ಲಕ್ಷ್ಮಿ ಯಶಸ್ವಿಯಾಗಿ ಹೆಜ್ಜೆ ಹಾಕಿದೆ. ಲಕ್ಷ್ಮಿ ಆನೆ ಕೂಡ ಜಂಬೂಸವಾರಿಗೆ ಸಂಪೂರ್ಣ ಸಿದ್ದವಾಗಿದೆ ಎಂದು ಹೇಳಿದರು.