ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ನಗರದಲ್ಲಿ ಹಲವಾರು ಕಾರ್ಯಕ್ರಮಗಳು ಜರುಗುತ್ತಿವೆ. ದಸರಾ ಮಹೋತ್ಸವ 2024ರ ಐದನೇ ದಿನವಾದ ಇಂದು ಅರಮನೆ ಆವರಣದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಮೈಸೂರಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಯೋಗಪಟುಗಳು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಿಧ ಬಗೆಯ ಆಸನಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧನೆಯ ಜೊತೆಗೆ ಪ್ರಜಾಪ್ರಭುತ್ವದ ಆಶಯಗಳನ್ನು ಸಾರುವ ಪ್ಲಕಾರ್ಡ್ ಪ್ರದರ್ಶನ ಮಾಡಲಾಯಿತು.
ಗಮನ ಸೆಳೆದ ಯೋಗ ಗುಚ್ಚ ನೃತ್ಯ ಕಾರ್ಯಕ್ರಮ
ಕಾರ್ಯಕ್ರಮದ ಕೊನೆಯ ಹಂತದಲ್ಲಿ ಮೈಸೂರಿನ ವಿವಿಧ ಯೋಗ ಸಂಸ್ಥೆಗಳ ಯೋಗ ಪಟುಗಳು ಹಾಗು ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಪ್ರದರ್ಶನ ಮಾಡಲಾಯಿತು. ಯೋಗಾಸನದ ವಿವಿಧ ಭಂಗಿಗಳನ್ನು ನೃತ್ಯ ರೂಪಕದ ಮೂಲಕ ಪ್ರದರ್ಶನ ಮಾಡಿದ ಯೋಗಪಟುಗಳು, ನೃತ್ಯದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಸಾರಿದರು.
ವಿಜಯದಶಮಿಯ ದಿನ ಜಂಬೂಸವಾರಿ ಮೆರವಣಿಗೆ ಮುಗಿದ ಬಳಿಕ ಪಂಜಿನ ಕವಾಯತು ಮೈದಾನದಲ್ಲಿಯೂ ಕೂಡ ಯೋಗ ಗುಚ್ಚ ಕಾರ್ಯಕ್ರಮ ಅನಾವರಣಗೊಳ್ಳಲಿದೆ.
ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಎಸ್ಎಸ್ ಸಮೂಹದ ಮುಖ್ಯಸ್ಥರಾದ ಶ್ರೀಹರಿ, ಯೋಗ ದಸರಾ ಉಪಸಮಿತಿಯ ವಿಶೇಷಾಧಿಕಾರಿ ಕೆ ರಮ್ಯ, ಕಾರ್ಯಾಧ್ಯಕ್ಷ ಅನಂತರಾಜು, ಕಾರ್ಯದರ್ಶಿ ಪುಷ್ಪ ಸೇರಿದಂತೆ ಇನ್ನಿತರ ಸದಸ್ಯರು ಸೇರಿದಂತೆ ನೂರಾರು ಯೋಹ ಪಟುಗಳು ಭಾಗಿಯಾಗಿದ್ದರು.