ಟಿ.ನರಸೀಪುರ: ಮೂಗೂರು ತ್ರಿಪುರ ಸುಂದರಿ ದೇವಿಯ ದೇವಾಲಯಕ್ಕೆ ಸಂಸದ ಸುನಿಲ್ ಬೋಸ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಟಿ ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದಲ್ಲಿರುವ ತ್ರಿಪುರ ಸುಂದರಿ ದೇವಸ್ಥಾನದಲ್ಲಿ ಸಂಸದರು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಸಂಸದ ಸುನಿಲ್ ಬೋಸ್ ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸಲ್ಲಿಸಲಾಯ್ತು.
ಈ ಸಂದರ್ಭ ಮಾಧ್ಯಮಗಳ ಜತೆ ಅವರು ಮಾತನಾಡಿ, ಟಿ ನರಸೀಪುರ ಕ್ಷೇತ್ರದ ಹಲವು ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ನಮ್ಮ ತಂದೆಯವರು ಕ್ಷೇತ್ರಕ್ಕೆ ಬಂದು ತುಂಬಾ ದಿನ ಆಗಿದೆ. ಅವರ ಸಮ್ಮುಖದಲ್ಲೇ ಚಾಲನೆ ಸಿಗಲಿ ಎಂಬುದಕ್ಕೆ ಕಾಯುತ್ತಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲೂ ಕ್ರೀಡಾಂಗಣ ಇದೆ. ಟಿ ನರಸೀಪುರ ಕ್ಷೇತ್ರದಲ್ಲಿ ಕ್ರೀಡಾಂಗಣ ಇಲ್ಲ. ಸಿದ್ದರಾಮಯ್ಯ, ಮಹದೇವಪ್ಪ ಇಬ್ಬರು ಪ್ರತಿನಿದಿಸುವ ಕ್ಷೇತ್ರ ಟಿ ನರಸೀಪುರ. ಹೀಗಾಗಿ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಕೆಲಸ ನಡೆಯುತ್ತಿದೆ. ಶೀಘ್ರದಲ್ಲೇ ಟಿ ನರಸೀಪುರ ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಆಗುತ್ತದೆ ಎಂದರು. ವಿಜಯೇಂದ್ರ ಹಾಗೂ ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ರಾಜಕೀಯ ಲೇಪನ ಬೇಡ. ಅದೊಂದು ಸೌಹಾರ್ದತೆ ಭೇಟಿ, ಟೋಲ್ ವಿಚಾರಕ್ಕೆ ಭೇಟಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.