ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣ ಪೊಲೀಸ್ ಠಾಣೆಯ ನಿರ್ಗಮಿತ ಪಿಎಸ್ಐ ಸೇರಿ ನಾಲ್ವರು ಪೊಲೀಸರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಸೂಚನೆ ಮೇರೆಗೆ ಎಫ್ಐಆರ್ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ಎಂ.ನಾಗೇಂದ್ರ ಬಾಬು ಪ್ರಕರಣದ ದೂರುದಾರ. ಟೌನ್ ಠಾಣೆಯ ಪೊಲೀಸ್ ಗೋಪಾಲಸ್ವಾಮಿ, ನಿರ್ಗಮಿತ ಪಿಎಸ್ಐ ಬಿ.ಕೆ.ಮಹೇಶ್ ಕುಮಾರ್, ಎಸ್ಬಿ ಡ್ಯೂಟಿ ಹೆಡ್ ಕಾನ್ಸ್ ಸ್ಟೇಬಲ್ ಲಿಂಗರಾಜು ಹಾಗೂ ಇನ್ನೊರ್ವ ಪೊಲೀಸ್(ಹೆಸರು ದಾಖಲಿಸಿಲ್ಲ) ಆರೋಪಿಗಳಾಗಿದ್ದಾರೆ.
ಇವರ ವಿರುದ್ಧ ಸೆ.28 ರಂದು ಸಬ್ಇನ್ಸ್ ಪೆಕ್ಟರ್ ಬಿ.ವಿ.ವರ್ಷ ಎಫ್ಐಆರ್ ದಾಖಲಿಸಿದ್ದಾರೆ.
ಘಟನೆ ವಿವರ: ದೂರುದಾರ ಎಂ.ನಾಗೇಂದ್ರಬಾಬು, ಮಾ.17 ರಂದು ಬೆಳಗ್ಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಯಳಂದೂರಿನಿಂದ ಕೊಳ್ಳೇಗಾಲಕ್ಕೆ ಪ್ರಯಾಣಿಸಿದ್ದು. ಈ ವೇಳೆ ಬಸ್ ನಲ್ಲಿ ನಿಂತಿದ್ದ ಈತ ಬಸ್ ಬ್ರೇಕ್ ಹಾಕಿದಾಗ ಆಕಸ್ಮಿಕವಾಗಿ ಆಯತಪ್ಪಿ ಸೀಟಿನಲ್ಲಿ ಕುಳಿತಿದ್ದವರ ಮೇಲೆ ಬಿದ್ದಿದ್ದಾನೆ. ಆಗ ಯಾರೋ ವಿರೋಧ ಮಾಡಿಲ್ಲ. ಆದರೆ, ದೂರುದಾರ ಬಸ್ಸಿನಿಂದ ಇಳಿಯಲು ಕೊಳ್ಳೇಗಾಲದ ಬಸ್ ನಿಲ್ದಾಣದಲ್ಲಿ ಪ್ರಯತ್ನಿಸುವ ವೇಳೆ ಮಹಿಳೆಯೊಬ್ಬರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದು, ಈ ಸಂದರ್ಭದಲ್ಲಿ ನಿಲ್ದಾಣದಲ್ಲಿದ್ದ ಆರೋಪಿ ಪೊಲೀಸ್ ಗೋಪಾಲಸ್ವಾಮಿ ದೂರುದಾರನಿಗೆ ಏಕಾಏಕಿ ಹಲ್ಲೆಗೈದು ಠಾಣೆಗೆ ಕರೆದೊಯ್ದಿದ್ದಾರೆ. ನಾನೇನು ತಪ್ಪು ಮಾಡಿಲ್ಲ ಎಂದು ಹೇಳಿದರೂ ಕೇಳದೆ ನಿರ್ಗಮಿತ ಪಿಎಸ್ಐ ಮಹೇಶ್ ಕುಮಾರ್, ಎಸ್ಬಿ ಡ್ಯೂಟಿ ಪೊಲೀಸ್ ಲಿಂಗರಾಜು ಹಾಗೂ ಇನ್ನೊಬ್ಬ ಪೊಲೀಸ್ ಹಲ್ಲೆಗೈದಿದು ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ದೂರುದಾರ, ಎಸ್ಪಿಗೆ ಲಿಖಿತ ದೂರು ನೀಡಿದ್ದು, ಹಾಗಾಗಿ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ.