ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ 7ನೇ ದಿನವಾದ ಇಂದು ಯೋಗ ದಸರಾ ಉಪ ಸಮಿತಿ ವತಿಯಿಂದ ಚಾಮುಂಡಿ ಬೆಟ್ಟದ ತಪ್ಪಲು ಮತ್ತು ದೇವಸ್ಥಾನದ ಆವರಣದಲ್ಲಿ ‘ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ‘ ಕಾರ್ಯಕ್ರಮವನ್ನು ನಡೆಸಲಾಯಿತು.
ಯೋಗ ಅಧಿಕಾರೇತರ ಉಪಸಮಿತಿಯ ಅಧ್ಯಕ್ಷರಾದ ಎಂ.ಮಹೇಶ್ ಅವರು ಸಮಾರಂಭವನ್ನು ಉದ್ಘಾಟನೆ ಮಾಡಿದರು. ಯೋಗ ಸರಪಳಿಯಲ್ಲಿ ಯೋಗಪಟುಗಳು, ವಿದ್ಯಾರ್ಥಿಗಳು ಹಾಗೂ ಯುವಕರು, ಹಿರಿಯ, ಸಾರ್ವಜನಿಕರು ಸೇರಿದಂತೆ ಮೈಸೂರಿನ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 250 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಬೆಳಗ್ಗೆ 7 ಗಂಟೆಗೆ ಚಾಮುಂಡಿ ಬೆಟ್ಟದ ಆವರಣದಲ್ಲಿ ನೆರೆದಿದ್ದ ಜನರ ದೃಶ್ಯವು ಮೈಸೂರಿನ ಸೊಬಗನ್ನು ಹೆಚ್ಚಿಸಿತು. ಯೋಗಪಟುಗಳು ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ, ಸೂರ್ಯ ನಮಸ್ಕಾರ, ವಜ್ರಾಸನ, ಸ್ವಾನಾಸನ, ತ್ರಿಕೋನಾಸನ, ಶವಾಸನ, ಸಿದ್ಧಾಸನ, ಅರ್ಧಚಕ್ರಾಸನ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್.ಸಮೂಹದ ಮುಖ್ಯಸ್ಥರಾದ ಶ್ರೀಹರಿ, ಯೋಗ ದಸರಾ ಉಪಸಮಿತಿಯ ವಿಶೇಷಾಧಿಕಾರಿ ಕೆ.ರಮ್ಯ, ಕಾರ್ಯಾಧ್ಯಕ್ಷ ಅನಂತರಾಜು, ಕಾರ್ಯದರ್ಶಿ ಪುಷ್ಪ , ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮ ಮತ್ತು ಉಪಾಧ್ಯಕ್ಷ ರವಿಕುಮಾರ್ ವೈ ಎಸ್ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.