ಬೆಂಗಳೂರು: ರಾಜ್ಯದಲ್ಲಿ ಈರುಳ್ಳಿ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಕಡಿಮೆ ಗುಣಮಟ್ಟದ ಈರುಳ್ಳಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿರುವ ಹಿನ್ನೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ₹75- 80ಕ್ಕೆ ಮಾರಾಟವಾಗುತ್ತಿದೆ. ಪ್ರತಿನಿತ್ಯ ಬಳಸುವ ಈರುಳ್ಳಿ ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದೆ. ಅಲ್ಲದೆ ಬೆಲೆ ಮತ್ತಷ್ಟು ಹೆಚ್ಚುವ ಆತಂಕ ಗ್ರಾಹಕರನ್ನು ಕಾಡುತ್ತಿದೆ.
ಕರ್ನಾಟಕದ ಹೊಸ ಈರುಳ್ಳಿಗೂ ಉತ್ತಮ ದರವಿದ್ದು, ಒಂದೇ ದಿನ ಇಟ್ಟು ಖರ್ಚು ಮಾಡಬೇಕಾದಂತಹ ಮೂರನೇ ದರ್ಜೆ ಈರುಳ್ಳಿಗೂ ಕ್ವಿಂಟಲ್ಗೆ ₹2800 ಯಿಂದ ಉತ್ತಮ ಗುಣಮಟ್ಟದ ಈರುಳ್ಳಿಗೆ ಗರಿಷ್ಠ ₹4000 ದರ ನಿಗದಿಯಾಗಿದೆ. ಇದರ ಪರಿಣಾಮ ಒಂದೆರಡು ದಿನಗಳಲ್ಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಮತ್ತಷ್ಟು ರೇಟ್ ಹೆಚ್ಚಳವಾಗುವ ಸಾಧ್ಯತೆ ಇದೆ. ದರ ಹೆಚ್ಚಿರುವ ಕಾರಣ ತೇವಾಂಶ ಇರುವ ಈರುಳ್ಳಿಯನ್ನೂ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸರಬರಾಜು ಆಗುತ್ತಿರುವಂತೆ ಕಂಡುಬರುತ್ತಿದೆ. ಆದರೆ, ವಾಸ್ತವವಾಗಿ ರಾಜ್ಯದಲ್ಲಿ ಹೆಚ್ಚು ಈರುಳ್ಳಿ ಇಲ್ಲ. ಮಳೆಯಿಂದ ನಾಶವಾಗಿವೆ. ಮಳೆಯ ಕಾರಣ ಬೆಳೆ ನಾಶವಾಗಿದ್ದು ಈ ಸಲ ಈರುಳ್ಳಿ ಇಳುವರಿ ಕಡಿಮೆ. ಹೀಗಾಗಿ ಇನ್ನೂ ಸ್ವಲ್ಪ ತಿಂಗಳು ಈರುಳ್ಳಿ ಬೆಲೆ ಏರಿಕೆಯಾಗುತ್ತಿರಲಿದೆ. ಇನ್ನೊಂದೆಡೆ, ಬೆಳ್ಳುಳ್ಳಿ ದರವೂ ಏರಿಕೆಯಾಗತೊಡಗಿದ್ದು, ಚಿಲ್ಲರೆ ಮಾರುಕಟ್ಟೆಗಳಲ್ಲಿ ಕಿಲೋಗೆ 450 ರೂಪಾಯಿ ದಾಟಿದೆ. ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶದಿಂದ ಬರುತ್ತಿದ್ದ ಬೆಳ್ಳುಳ್ಳಿ ಕಡಿಮೆಯಾಗಿದೆ.