ಮೈಸೂರು : ಹರಿಯಾಣ ಸೋಲಿಗೆ ಮುಡಾ ಹಗರಣ ಕಾರಣವಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮೈಸೂರಲ್ಲಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖುದ್ದು ಪ್ರಧಾನಿ ಮೋದಿ ಸಿದ್ದರಾಮಯ್ಯ ಅವರ ರಾಜೀನಾಮೆ ಬಗ್ಗೆ ಹರಿಯಾಣದಲ್ಲಿ ಪ್ರಸ್ತಾಪ ಮಾಡಿದ್ದರು. ಆದ್ರೆ ಚುನಾವಣಾ ಫಲಿತಾಂಶದ ಮೇಲೆ ಮುಡಾ ಹಗರಣ ಪ್ರಭಾವ ಬೀರಿಲ್ಲ ಎಂದು ಹೇಳಿದರು. ಹರಿಯಾಣದಲ್ಲಿ ಮುಡಾ ಹಗರಣದ ಬಗ್ಗೆ ಬಿಜೆಪಿ ಅಬ್ಬರದ ಪ್ರಚಾರ ನಡೆಸಿ, ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿದ್ದಾರೆಂದು ಬಿಂಬಿಸಲಾಯ್ತು. ಇನ್ನು ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆದಿಲ್ಲ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ವಿಪಕ್ಷಗಳು ಸುಖಾಸುಮ್ಮನೆ ಗೊಂದಲ ಸೃಷ್ಟಿ ಮಾಡುತ್ತಿವೆ ಎಂದು ಹೇಳಿದರು. ಹಾಗೆಯೇ ಮಹದೇವಪ್ಪ ಮನೆಯ ಡಿನ್ನರ್ ಪಾರ್ಟಿ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಪರಮೇಶ್ವರ್, ಇದರಲ್ಲಿ ರಾಜಕೀಯ ಇಲ್ಲ. ಮೈಸೂರಿಗೆ ಬಂದಿದ್ದೆ.ಮಹದೇವಪ್ಪ ಮನೆಗೆ ಊಟಕ್ಕೆ ಕರೆದರು. ಕುಟುಂಬ ಸಮೇತ ಹೋಗಿ ಊಟ ಮಾಡಿದ್ದೇವೆ. ಇದಕ್ಕೆ ಬೇರೆ ಯಾವುದೇ ರಾಜಕೀಯ ಬಣ್ಣ ಬೇಡ ಎಂದು ತಿಳಿಸಿದರು.
ಮೈಸೂರಲ್ಲಿ ಡಿನ್ನರ್ ಪಾಲಿಟಿಕ್ಸ್; ರಹಸ್ಯ ಮಾತುಕತೆ
ಇನ್ನು ದಸರಾ ಮಹೋತ್ಸವದ ಹಿನ್ನೆಲೆ ರಾಜಕೀಯ ಮುಖಂಡರು ಮೈಸೂರಲ್ಲಿ ವಾಸ್ತವ್ಯ ಹೂಡಿದ್ದು, ಮೈಸೂರಿನಲ್ಲಿ ಡಿನ್ನರ್ ಪಾಲಿಟಿಕ್ಸ್ ರಾಜ್ಯ ರಾಜಕಾರಣಕ್ಕೆ ಹೊಸ ಟ್ವಿಸ್ಟ್ ಕೊಡಲಿದ್ಯಾ ಅನ್ನೋ ಕುತೂಹಲ ಎಲ್ಲೆಡೆ ಮನೆಮಾಡಿದೆ. ಮಂಗಳವಾರ ರಾತ್ರಿ ಮಹದೇವಪ್ಪ ನಿವಾಸದಲ್ಲಿ ಗೃಹ ಸಚಿವ ಪರಂ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಸೇರಿ ಅನೇಕರು ಭೇತಿ ಮಾಡಿ ಮಹತ್ವದ ರಾಜಕೀಯ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಡಿನ್ನರ್ ಮೀಟಿಂಗ್ ನಲ್ಲಿ, ಸತೀಶ್ ಜಾರಕಿಹೊಳಿ, ಮಹದೇವಪ್ಪ, ಶಾಸಕ ಎ.ಆರ್ ಕೃಷ್ಣ ಮೂರ್ತಿ ಭಾಗಿಯಾಗಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಬದಲಾವಣೆ ಚರ್ಚೆ ಬೆನ್ನಲ್ಲೇ ಎಲ್ಲಾ ನಾಯಕರು ರಹಸ್ಯ ಮಾತುಕತೆ ನಡೆಸಿದ್ದಾರೆ. ಮುಡಾ ಕೇಸ್ ನಲ್ಲಿ ಸಿಎಂ ವಿರುದ್ಧ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಈ ಎಲ್ಲಾ ಮುಂಚೂಣಿ ನಾಯಕರು ಭೇಟಿ ಆಗಿರೋದು ಹೊಸ ಸಂಚಲನ ಮೂಡಿಸಿದೆ. ಭೇಟಿಯಾದ ಎಲ್ಲಾ ಕೈ ನಾಯಕರು ಸಿಎಂ ಸಿದ್ದು ಬಣದಲ್ಲಿದ್ದು , ಒಂದು ವೇಳೆ ಸಿಎಂ ಕುರ್ಚಿಗೆ ಸಂಚಕಾರ ಬಂದ್ರೆ ಮುಂದಿನ ನಡೆ ಬಗ್ಗೆ ತೀರ್ಮಾನಿಸಲು ಮೀಟಿಂಗ್ ಮಾಡಿದ್ದಾರೆ ಎನ್ನಲಾಗಿದೆ.