ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಈ ಮಧ್ಯೆ ಇಬ್ಬರು ಆರೋಪಿಗಳಿಗೆ ನಾಳೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಪ್ರಕರಣ ಸಂಬಂಧ ಎ3 ಆಗಿರುವ ಮಲ್ಲಿಕಾರ್ಜುನಸ್ವಾಮಿ ಮತ್ತು ಎ4 ಆರೋಪಿಯಾದ ಜಮೀನು ಮಾಲೀಕ ದೇವರಾಜುಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆA4 ಆರೋಪಿ ದೇವರಾಜುಗೆ ನೋಟಿಸ್ ಜಾರಿ ಮಾಡಿದ್ದ ಅಧಿಕಾರಿಗಳು, ಇಂದು A3 ಆರೋಪಿ ಮಲ್ಲಿಕಾರ್ಜುನಸ್ವಾಮಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಏಕಕಾಲಕ್ಕೆ ಇಬ್ಬರನ್ನು ಕರೆಸಿ ವಿಚಾರಣೆ ಮಾಡಲಿರುವ ಲೋಕಾಯುಕ್ತ ಅಧಿಕಾರಿಗಳು, ಜಮೀನು ಹೇಗೆ ಬಂತು? ಹೇಗೆ ಮಾರಾಟ ಮಾಡಿದರು? ಜಮೀನನ್ನು ಹೇಗೆ ಕೊಂಡುಕೊಂಡರು? ಯಾವಾಗ ಕೊಂಡುಕೊಂಡರು? ಎಂದು ಜಮೀನು ಮಾರಿದ, ಕೊಂಡುಕೊಂಡ ಇಬ್ಬರನ್ನೂ ವಿಚಾರಣೆ ನಡೆಸಲಿದ್ದಾರೆ. ನಾಳೆ ಮುಖಾಮುಖಿ ತನಿಖೆಗೆ ಇಬ್ಬರು ಆರೋಪಿಗಳು ಖುದ್ದು ಹಾಜರಾಗಲಿದ್ದು, ಏಕಕಾಲಕ್ಕೆ ವಿಚಾರಣೆ ನಡೆಸುವ ಮೂಲಕ ಅಧಿಕಾರಿಗಳು ತನಿಖೆಗೆ ಟ್ವಿಸ್ಟ್ ನೀಡಲಿರುವರಾ ಕಾದು ನೋಡಬೇಕಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಎಸ್ಪಿ ಉದೇಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದರೆ, ಸಿಎಂ ಪತ್ನಿ ಪಾರ್ವತಿ ಅವರು ಎರಡನೇ ಆರೋಪಿಯಾಗಿದ್ದಾರೆ.