ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ರ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕೇವಲ ಎರಡು ದಿನಗಳಷ್ಟೇ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಅಂಬಾವಿಲಾಸ ಅರಮನೆ
ಆವರಣದಲ್ಲಿಂದು ಅಂತಿಮ ಹಂತದ ಪುಷ್ಪಾರ್ಚನೆಯ ರಿಹರ್ಸಲ್ ಜರುಗಿದ್ದು, ಇಂದೂ ಕೂಡ ಪೊಲೀಸ್ ಇಲಾಖೆಯ ವಿವಿಧ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು.
ಅಶ್ವರೋಹಿ ದಳ, ದಸರಾ ಗಜಪಡೆ ಇಂದು ಅಂತಿಮ ಹಂತದ ರಿಹರ್ಸಲ್ ನಲ್ಲಿ ಭಾಗಿಯಾಗಿದ್ದು, ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಮುತ್ತುರಾಜ್,, ಡಿಸಿಎಫ್ ಡಾ ಪ್ರಭುಗೌಡ, ಸಿಎಆರ್ ಡಿಸಿಪಿ ಮಾರುತಿ ಅವರಿಂದ ಪುಷ್ಪಾರ್ಚನೆ ನೆರವೇರಿಸಲಾಯಿತು. ಅಂಬಾರಿ ಹೊರುವ ಅಭಿಮನ್ಯುವಿಗೆ ಪುಷ್ಫಾರ್ಚನೆ ಮಾಡುತ್ತಿದ್ದಂತೆಯೇ ಅರಮನೆಯ ಹೊರ ಆವರಣದಲ್ಲಿ ಸಿಎಆರ್ ಸಿಬ್ಬಂದಿಗಳಿಂದ 7 ಫಿರಂಗಿ ಗಾಡಿಗಳಿಂದ 21 ಬಾರಿ ಕುಶಾಲತೋಪು ಸಿಡಿಸಲಾಯಿತು.
ಇನ್ನು ಅಂತಿಮ ಹಂತದ ರಿಹರ್ಸಲ್ ನಲ್ಲಿ ನಿಶಾನೆ ಆನೆಯಾಗಿ ಧನಂಜಯ ಮುಂಚೂಣಿಯಲ್ಲಿ ಸಾಗಿದ್ದು, ಧನಂಜಯನನ್ನು ಹಿಂಬಾಲಿಸುತ್ತಾ ನೌಫತ್ ಆನೆ ಗೋಪಿ ಸಾಗಿದನು. ಅದರ ಹಿಂದೆ ಸಾಲಾನೆಗಳು ಸಾಗಿದ್ದು,
ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯುವಿಗೆ ವೇದಿಕೆ ಮೇಲಿದ್ದ ಅಧಿಕಾರಿಗಳಿಂದ ಪುಷ್ಪಾರ್ಚನೆ ಸಲ್ಲಿಸಲಾಯಿತು. ಅಭಿಮನ್ಯುವಿನ ಎಡಬಲದಲ್ಲಿ ಲಕ್ಷ್ಮಿ ಹಾಗು ಹಿರಣ್ಯ ಆನೆಗಳು ಕುಮ್ಕಿ ಆನೆಗಳಾಗಿ ಅಭಿಮನ್ಯುವಿಗೆ ಸಾಥ್ ನೀಡಿದವು.
ಈ ವೇಳೆ ಡಿಸಿಎಫ್ ಡಾ ಐ ಬಿ ಪ್ರಭುಗೌಡ ಮಾತನಾಡಿ, ಇಂದು ಅಂತಿಮ ಹಂತದ ಪುಷ್ಪಾರ್ಚನೆಯ ರಿಹರ್ಸಲ್ ನಡೆಸಲಾಯಿತು. ಈ ಮೂಲಕ ದಸರಾ ಗಜಪಡೆಗೆ ನೀಡುತ್ತಿದ್ದ ಎಲ್ಲಾ ರೀತಿಯ ತಾಲೀಮುಗಳು ಮುಗಿದಿವೆ. ನಾಳೆ ಯಾವುದೇ ರೀತಿಯ ತಾಲೀಮು ಇರುವುದಿಲ್ಲ. ನಾಳೆ ಗಜಪಡೆಯನ್ನು ದರ್ಗಾಗೆ ಕರೆದೊಯ್ಯಲಾಗುವುದು. ಜಂಬೂಸವಾರಿ ಮೆರವಣಿಗೆಯಲ್ಲಿ ಒಂಬತ್ತು ಆನೆಗಳು ಭಾಗಿಯಾಗಲಿದ್ದು, ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ. ಅಭಿಮನ್ಯುವಿನ ಎಡಬಲದಲ್ಲಿ ಹಿರಣ್ಯ ಹಾಗು ಲಕ್ಷ್ಮಿ ಕುಮ್ಕಿ ಆನೆಗಳಾಗಿ ಸಾಗಲಿವೆ. ಧನಂಜಯ ನಿಶಾನೆ ಆನೆಯಾಗಿ, ಗೋಪಿ ನೌಪತ್ತು ಆನೆಯಾಗಿ ಸಾಗಲಿದ್ದಾನೆ.
ಉಳಿದ ನಾಲ್ಕು ಆನೆಗಳು ಸಾಲಾನೆಗಳಾಗಿ ಸಾಗಲಿವೆ ಎಂದು ಮಾಹಿತಿ ನೀಡಿದ್ದಾರೆ.