ಮೈಸೂರು: ಸಿಎಂ ಕುರ್ಚಿಗೆ ಕಂಟಕ ತಂದೊಡ್ಡಿರುವ ಮುಡಾ ಹಗರಣದ ತನಿಖೆ ಚುರುಕುಗೊಂಡಿದ್ದು, ಇಂದು ಪ್ರಕರಣದ A3 ಹಾಗೂ A4 ಆರೋಪಿಗಳು ಲೋಕಾಯುಕ್ತ ತನಿಖೆಗೆ ಹಾಜರಾಗಿದ್ದಾರೆ. ಮುಡಾ ಹಗರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ಕುರಿತಂತೆ A3 ಆರೋಪಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ A4 ಆರೋಪಿ ದೇವರಾಜು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನಿನ್ನೆಯೇ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ ಕಚೇರಿಗೆ ಇಬ್ಬರು ಆರೋಪಿಗಳು ಹಾಜರಾಗಿದ್ದು, ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ.
ಕೋರ್ಟ್ ಆದೇಶದಂತೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಎ1 ಆರೋಪಿಯಾಗಿ ಮುಡಾ ಹಗರಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅವರ ಪತ್ನಿ ಪಾರ್ವತಿ ಎ.2 ಆರೋಪಿಯಾಗಿದ್ದಾರೆ. ಸಿದ್ಧರಾಮಯ್ಯ ಭಾಮೈದ ಮಲ್ಲಿಕಾರ್ಜನ ಸ್ವಾಮಿ ಎ3 ಆರೋಪಿಯಾದರೇ, ಎ.4 ಆರೋಪಿಯನ್ನಾಗಿ ಜಮೀನು ಮಾಲೀಕ ದೇವರಾಜು ಹಾಗೂ ಇತರರು ಎ5 ಆರೋಪಿಯನ್ನಾಗಿ ಮಾಡಿ ಮೈಸೂರಿನ ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸುಧೀರ್ಘ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು
ಲೋಕಾಯಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದ್ದು, ಇಬ್ಬರು ಆರೋಪಿಗಳನ್ನು ಎದುರು ಬದುರು ಕೂರಿಸಿ ಇಂದು ವಿಚಾರಣೆ ನಡೆಸಲಾಗುತ್ತಿದೆ. ಜಮೀನು ಖರೀದಿ ಯಾವಾಗ, ಜಮೀನು ಮಾರಾಟ ಪ್ರಕ್ರಿಯೆ, ಮಾರಾಟ ಮಾಡಿದ ವೇಳೆ ಜಮೀನು ಮುಡಾ ವಶಕ್ಕೆ ಪಡೆದಿತ್ತಾ. ನೋಟಿಫೈ ಮಾಡದೇ ಜಮೀನಿನಲ್ಲಿ ಮುಡಾ ಪಾರ್ಕ್, ರಸ್ತೆ ನಿರ್ಮಿಸಿತ್ತಾ. ಜಮೀನು ಮಾರಾಟಕ್ಕೆ ದೇವರಾಜು ಒಬ್ಬರಿಗೆ ಹಕ್ಕು ಬಂದಿದ್ದು ಹೇಗೆ. ಡಿನೋಟಿಫೈ ವೇಳೆ ಸಿಎಂ ಸಿದ್ದರಾಮಯ್ಯ ಹಸ್ತಕ್ಷೇಪ ಇತ್ತಾ ಎಂಬೆಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಲೋಕಾಯುಕ್ತ ಎಸ್ಪಿ ಉದೇಶ್ ಪ್ರಶ್ನೆ ಮಾಡಿ ಇಂದಿನ ವಿಚಾರಣೆ ನಡೆಸಲಿದ್ದಾರೆ.
ಇನ್ನು ಮುಡಾ ಹಗರಣ ಕುರಿತಂತೆ ಇದೇ ಮೊದಲ ಬಾರಿಗೆ ಸಿಎಂ ಬಾಮೈದ ಮಲ್ಲಿಕಾರ್ಜುನಸ್ವಾಮಿ, ಜಮೀನು ಮಾಲೀಕ ದೇವರಾಜು ವಿಚಾರಣೆ ಎದುರಿಸುತ್ತಿದ್ದು, ಲೋಕಾಯುಕ್ತ ಎಸ್ಪಿ ಪ್ರಶ್ನೆಗೆ ದಾಖಲೆ ನೀಡಿ ಉತ್ತರವನ್ನು ನೀಡ್ತಾ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.