ಮೈಸೂರು: ದಸರಾ ಗಜಪಡೆಯ ಮಾವುತರ ಕುಟುಂಬಕ್ಕೆ ಆಯುಧಪೂಜೆ ದಿನವಾದ ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯಿಂದ ಉಪಹಾರ ಕೂಟವನ್ನು ಆಯೋಜಿಸಲಾಗಿತ್ತು. ಪ್ರತಿ ವರ್ಷ ಗಜಪಡೆಯ ಕಾವಾಡಿಗಳು, ಮಾವುತರ ಕುಟುಂಬಸ್ಥರಿಗೆ ಸಚಿವೆ ಶೋಭಾಕರಂದ್ಲಾಜೆ ಉಪಹಾರ ಕೂಟ ಏರ್ಪಡಿಸುತ್ತಾ ಬಂದಿದ್ದಾರೆ. ಅಂತೆಯೇ ಇಂದು ಕೂಡ ಉಪಹಾರ ಕೂಟವನ್ನು ಸಚಿವೆ ಆಯೋಜಿಸಿದ್ದರು.
ಇಡ್ಲಿ, ದೋಸೆ, ಪೊಂಗಲ್, ಹೋಳಿಗೆ, ಕೇಸರಿ ಬಾತ್ ಸೇರಿದಂತೆ ಹಲವು ಖಾದ್ಯಗಳನ್ನು ಸಚಿವೆ ಶೋಭಾ ಕರಂದ್ಲಾಜೆ ಉಣ ಬಡಿಸಿದ್ದಾರೆ. ಈ ಮೂಲಕ ಗಜಪಡೆಯ ಮಾವುತರು ಕಾವಾಡಿಗಳ ಕುಟುಂಬಸ್ಥರಿಗೆ ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ ಶೋಭಾ ಕರಂದ್ಲಾಜೆ. ಇದೇ ವೇಳೆ ಅರಮನೆ ಆವರಣದಲ್ಲಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ರೌಂಡ್ಸ್ ಹಾಕಿ, ದಸರಾ ಗಜಪಡೆಗೆ ಕಬ್ಬು ನೀಡಿದ್ದಾರೆ. ಆನೆಗಳ ಮಾವುತರು ಕಾವಾಡಿಗಳ ಯೋಗಕ್ಷೇಮವನ್ನು ಕೂಡ ವಿಚಾರಿಸಿದ್ದಾರೆ. ಈ ಸಂದರ್ಭ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು.
ಈ ವೇಳೆ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದೇನೆ. ಅದೇ ರೀತಿ ಕಾವಾಡಿಗರು ಮಾವುತರ ಕುಟುಂಬಕ್ಕೆ ಉಪಹಾರ ಬಡಿಸಿದ್ದೇನೆ. ಮುಂಚೆ ಮಾವುತರು ಕಾವಾಡಿಗರಿಗೆ 3ಸಾವಿರ ಗೌರವ ಧನ ನೀಡಲಾಗುತ್ತಿತ್ತು. ಆಗ ಮಾವುತರು ಕಾವಾಡಿಗರು ಪ್ರತಿಭಟನೆ ಮಾಡುತ್ತಿದ್ದರು. ನಾವು ಇದನ್ನು ಮನಗಂಡು ಅವರಿಗೆ ಪ್ರತಿ ತಿಂಗಳು ಸಂಬಳ ನೀಡುವ ಕೆಲಸ ಮಾಡಿದೆವು. ಯಡಿಯೂರಪ್ಪನವರು ಇದ್ದಾಗ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಂಬಳ ಕೊಡಿಸುವ ಕೆಲಸ ಮಾಡಿದೆವು. ಮಾವುತರು ಕಾವಾಡಿಗರ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಶಿಫಾರಸ್ಸು ಮಾಡಿದ್ದೆವು ಎಂದರು.
ನೆನ್ನೆಯಷ್ಟೇ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮುಖಾಂತರ ತೆರಳಿ ದರ್ಶನ ಪಡೆದೆ. ಚಾಮುಂಡಿ ಬೆಟ್ಟದಲ್ಲಿ ಶುಚಿತ್ವವೇ ಇಲ್ಲ. ದೇವಸ್ಥಾನದ ಆವರಣದಲ್ಲಿ ಯಾರೋ ಖಾಸಗಿ ವ್ಯಕ್ತಿಗಳು ಇದ್ದಾರೆ. ಅವರಿಗೆ ನಮ್ಮ ಮುಖ ಪರಿಚಯವೇ ಇಲ್ಲ. ದರ್ಶನಕ್ಕೆ ಬರುವ ಜನರನ್ನು ಎಳೆದು ಹಾಕುವ ಕೆಲಸ ಆಗುತ್ತಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದು. ಸ್ವಚ್ಛತೆ ಬಗ್ಗೆ ನಾವು ಸಾಕಷ್ಟು ಮಾತನಾಡುತ್ತೇವೆ. ದಸರಾ ಆಚರಣೆ ಜೊತೆಗೆ ಸ್ವಚ್ಛತೆ ಕಾಪಾಡಬೇಕು.ಇದರ ಜೊತೆಗೆ ಅಭಿವೃದ್ಧಿಯನ್ನು ಸಹ ಮಾಡಬೇಕು ಎಂದು ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.