ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಇಂದು ಮೈಸೂರಿನ ರಾಜಬೀದಿಗಳಲ್ಲಿ 750ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಜಗಾಂಬೀರ್ಯದಿಂದ ಸಾಗಲಿದ್ದಾನೆ. ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು ಸಕಲ ಸಿದ್ಧತೆ ಸಾಗಿದೆ.
ಅರಮನೆಯಲ್ಲಿ ಸಂಪ್ರದಾಯದಂತೆ ಎಲ್ಲ ಕಾರ್ಯಗಳು ನೆರವೇರಿತ್ತಿದ್ದು, ಪೂಜಾ ಕೈಂಕರ್ಯಗಳೊಂದಿಗೆ ಚಿನ್ನದ ಅಂಬಾರಿ ಒಳಗೆ ಪ್ರತಿಷ್ಠಾಪಿಸಲಾಗುವ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು ಜಂಬೂ ಸವಾರಿಯಲ್ಲಿ ಸಾಗುವನು. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಇಂದು ಮಧ್ಯಾಹ್ನ 1.41ರಿಂದ 2.10ರ ನಡುವೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ನಂತರ ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿಯ ಜಂಬೂ ಸವಾರಿಗೆ ಚಾಲನೆ ದೊರೆಯಲಿದ್ದು, ಜಂಬೂಸವಾರಿ ಹಿನ್ನೆಲೆಯಲ್ಲಿ ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಅರಮನೆಯಲ್ಲಿ ಜರುಗಿದ ವಿಜಯದಶಮಿ ಪೂಜಾ ಕೈಂಕರ್ಯ
ಚಾಮುಂಡಿ ಬೆಟ್ಟದಿಂದ ಉತ್ಸವಮೂರ್ತಿ ಈಗಾಗಲೇ ಅಂಬಾವಿಲಾಸ ಅರಮನೆ ತಲುಪಿದ್ದು, ಮೆರವಣಿಗೆ ಮೂಲಕ ಅರಮನೆಗೆ ತಲುಪಿದೆ. ಇನ್ನು ಬೆಳಗ್ಗೆಯಿಂದಲೇ ಅರಮನೆಯಲ್ಲಿ ಶಾಸ್ರ್ತೋಕ್ತವಾಗಿ ಪೂಜಾ ಕೈಂಕರ್ಯಗಳು ನೇರವೇರುತ್ತಿದೆ. ಸವಾರಿ ತೊಟ್ಟಿಯಲ್ಲಿ ನಡೆದ ಉತ್ತರ ಪೂಜೆಯಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳಿಗೆ ಪೂಜೆ ಸಲ್ಲಿಸಲಾಯಿತು. ಸವಾರಿ ತೊಟ್ಟಿಯಲ್ಲಿ ಜಟ್ಟಿ ಕಾಳಗ ನಡೆದಿದ್ದು,
ಜಟ್ಟಿಕಾಳಗ ಮುಗಿದ ಬಳಿಕ ಅರಮನೆ ಆವರಣದ ಭುವನೇಶ್ವರಿ ದೇವಸ್ಥಾನಕ್ಕೆ ಯದುವೀರ್ ವಿಜಯಯಾತ್ರೆ ಹೊರಟರು. ನಂತರ ಬನ್ನಿಪೂಜೆ ಸಲ್ಲಿಸಿ , ನೆರೆದಿದ್ದವರಿಗೆ ಬನ್ನಿ ಪ್ರಸಾದ ನೀಡಿ ಬಳಿಕ ಸ್ವಸ್ಥಾನಕ್ಕೆ ಯದುವೀರ್ ವಾಪಸ್ ಆಗಿದ್ದಾರೆ.
ಅರಮನೆಯ ಸಂಪ್ರದಾಯದಂತೆ ಎಲ್ಲಾ ಪೂಜಾ ಪುನಸ್ಕಾರಗಳು ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂತ್ಯವಾಗಲಿದ್ದು, ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿ ಪ್ರಾರಂಭವಾಗಲಿದೆ.