ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿಯ ಪೂಜಾ ಕೈಂಕರ್ಯಗಳು ಕೊನೆಗೊಂಡಿದೆ. ಯದುವೀರ್ ಒಡೆಯರ್ ಜಟ್ಟಿ ಕಾಳಗದ ನಂತರ ಅರಮನೆಯಿಂದ ವಿಜಯಯಾತ್ರೆ ಕೈಗೊಂಡು, ಬನ್ನಿ ಪೂಜೆ ಸಲ್ಲಿಸುವ ಮೂಲಕ ಅರಮನೆಯ 10 ದಿನಗಳ ಶರನ್ನವರಾತ್ರಿ ಸಂಭ್ರಮವು ಇಂದು ಸಂಪನ್ನಗೊಂಡಿತು.ನಾಡಹಬ್ಬ ಮೈಸೂರು ದಸರಾದ ಅಂತಿಮ ದಿನವಾದ ವಿಜಯದಶಮಿಯಂದು ಅರಮನೆಯಲ್ಲಿ ಸಾಂಪ್ರದಾಯಿಕ ದಸರಾ ಸಂಪನ್ನಗೊಂಡಿತು. ಬೆಳಗ್ಗೆಯಿಂದಲೇ ವಿಜಯದಶಮಿ ಧಾರ್ಮಿಕ ಕಾರ್ಯಕ್ರಮಗಳು ಅರಮನೆಯಲ್ಲಿ ವಿಜೃಂಭಣೆಯಿಂದ ನಡೆದಿದ್ದು, ಇದೀಗ ಎಲ್ಲಾ ಪೂಜಾ ವಿಧಿ ವಿಧಾನಗಳು ಮುಕ್ತಾಯಗೊಂಡಿದೆ.
ದಸರಾ ಜಂಬೂ ಸವಾರಿ ನೋಡಲು ಕಾತುರರಾಗಿರುವ ಜನತೆ
ಸಂಜೆ 4 ಗಂಟೆಯಿಂದ 4.30ರ ಶುಭಲಗ್ನದಲ್ಲಿ ಐತಿಹಾಸಿಕ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಗಜಪಡೆ ನಾಯಕ ಅಭಿಮನ್ಯು ನೇತೃತ್ವದಲ್ಲಿ ಜಂಬೂ ಸವಾರಿ ಸಾಗಲಿದ್ದು, ಜನರು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಕುಟುಂಬದವರು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದಾರೆ. ಮತ್ತೊಂದೆಡೆ, ಗಜಪಡೆ ಹಾಗೂ ಸ್ತಬ್ಧಚಿತ್ರಗಳು ಜಂಬೂ ಸವಾರಿಗೆ ಸಿದ್ಧರಾಗಿದ್ದಾರೆ.
ಅರಮನೆ ಆವರಣ ಸೇರಿದಂತೆ ನಗರದ ರಾಜಬೀದಿಗಳಲ್ಲಿ ಈಗಾಗಲೇ ಸಾರ್ವಜನಿಕರು ದಸರಾ ನೋಡಲು ಆಗಮಿಸಿದ್ದು, ಲಕ್ಷಾಂತರ ಜನರು ಸಿಂಹಾಸನದಲ್ಲಿ ಅಲಂಕರಿಸಿರುವ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲು ಕಾತುರರಾಗಿದ್ದಾರೆ.