ಪ್ರತಿನಿಧಿ ವರದಿ ಚಾಮರಾಜನಗರ
ಎನ್ ಜಿಒ ಕೇಂದ್ರಗಳು ಸರ್ಕಾರದ ಅನುದಾನದ ಮೂಲಕ ನಿರಾಶ್ರಿತರು ಉಳಿದುಕೊಳ್ಳಲು ವಸತಿ ಸೌಕರ್ಯಗಳನ್ನು ಒದಗಿಸಿಕೊಡುತ್ತಿವೆ. ನಿರಾಶ್ರಿತರು ಭಯಪಡುವ ಅಗತ್ಯವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಹೇಳಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ, ತಾಯಿಗೆ ವಯಸ್ಸಾಗುತ್ತಿದ್ದಂತೆ ಕೆಲವರು ಅವರನ್ನು ಮನೆಯಿಂದ ಹೊರಗೆ ಹಾಕುವ ಪದ್ಧತಿಯನ್ನು ಬೆಳೆಸಿಕೊಂಡಿದ್ದಾರೆ. ತಂದೆ, ತಾಯಿಯಿಂದ ಆಸ್ತಿ ಮತ್ತು ಹಣವನ್ನು ಪಡೆದು, ಬಳಿಕ ಅವರನ್ನು ಮನೆಯಿಂದ ಹೊರ ಹಾಕಿದರೆ ಅಂತಹ ಮಕ್ಕಳ ವಿರುದ್ಧ ಪ್ರಕರಣವನ್ನು ದಾಖಲಿಸಬಹುದು ಮನೆಯ ಹಿರಿಯರನ್ನು ನೋಡಿಕೊಳ್ಳುವುದು ಮಕ್ಕಳ ಬಹುದೊಡ್ಡ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಮಕ್ಕಳು ಪೋಷಕರನ್ನು ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಬಿಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಾದವರು ರಸ್ತೆ ಬದಿಯಲ್ಲಿ ಮಲಗುವುದು, ಆಹಾರವಿಲ್ಲದೆ ಎಷ್ಟೋ ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂತಹ ನಿರಾಶ್ರಿತರು ಕಂಡು ಬಂದರೆ ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ಕರೆತಂದರೆ ಅವರಿಗೆ ಅಗತ್ಯ ಸೌಕರ್ಯ ಸಿಗಲಿದೆ ಎಂದು ತಿಳಿಸಿದರು.
ಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ಡಾ.ಪುಟ್ಟಸ್ವಾಮಿ ಮಾತನಾಡಿ, ರಸ್ತೆ ಬದಿಯ ನಿರಾಶ್ರಿತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅವರನ್ನು ಕರೆತಂದು ವಸತಿ ಸೌಕರ್ಯ, ಊಟದ ವ್ಯವಸ್ಥೆ ಹಾಗೂ ಅವರು ಸ್ವಚ್ಛವಾಗಿರಲು ಅಗತ್ಯ ವಸ್ತುಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ನಿರಾಶ್ರಿತರು ಬೆಳಗ್ಗೆ ಹೊರಗಡೆ ಹೋಗಿ, ಸಂಜೆಯ ವೇಳೆಗೆ ಕೇಂದ್ರಕ್ಕೆ ಬರುವ ಅವಕಾಶವಿದೆ. ಅವರಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ವೈದ್ಯಾಧಿಕಾರಿ ಡಾ.ರಿಯಾ ಮಾತನಾಡಿ, ಹಿರಿಯ ಹಾಗೂ ಕಿರಿಯರು ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಆರೋಗ್ಯದ ಏರುಪೇರುಗಳನ್ನು ತಿಳಿಯಬಹುದು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಯೋಜನಾಧಿಕಾರಿ ವೆಂಕಟನಾಯಕ್, ಗ್ರೀನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಪ್ರಭುಸ್ವಾಮಿ, ಕಾರ್ಯದರ್ಶಿ ಮಹದೇವಸ್ವಾಮಿ, ನಿರಾಶ್ರಿತರ ಆಶ್ರಮದ ಕೋಮಲ, ಶಿವಕುಮಾರ್, ನಂದನ್, ಶುಶ್ರೂಷಕರಾದ ಶಿವಮ್ಮ, ದಿವ್ಯಾಬೇಬಿ ಇದ್ದರು.
10ಸಿಎಚ್ಎನ್.5:
ಚಾಮರಾಜನಗರದ ನ್ಯಾಯಾಲಯ ರಸ್ತೆಯಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮಾಡಲಾಯಿತು.