ಮೈಸೂರು: ಕೋರ್ಟ್ ಆದೇಶದಂತೆ ಬಹುಕೋಟಿ ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲಾಗಿದೆ. FIR ದಾಖಲಾಗಿ ದಿನಗಳೇ ಕಳೆದರೂ ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವುದೇ ತನಿಖೆ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇಂದು ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತಾ ಕಚೇರಿಗೆ ಭೇಟಿ ನೀಡಿ ಸಿದ್ದರಾಮಯ್ಯ ವಿರುದ್ಧ ತನಿಖೆ ಕೈಗೊಂಡು, ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಲೋಕಾಯುಕ್ತ ಎಸ್ಪಿ ಟಿ ಜೆ ಉದೇಶ್ ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ಕೆಲ ದಾಖಲೆಗಳನ್ನು ಕೊಟ್ಟಿದ್ದೀನಿ. ಸಿಎಂ ಹೈ ಕೋರ್ಟ್ ಗೆ ಸಲ್ಲಿಸಿರುವ ರಿಟ್ ಅರ್ಜಿಯ ಅಂಶಗಳನ್ನು ಉಲ್ಲೇಖ ಮಾಡಿ ಮಾಹಿತಿ ನೀಡಿದ್ದೇನೆ. ಸುಮಾರು 25 ಪುಟಗಳ ಮಾಹಿತಿ ಕೊಟ್ಟಿದ್ದೇನೆ. ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಕೆಲ ಮಾಹಿತಿಗಳನ್ನು ಕೊಡದೇ ಮುಚ್ಚಿಟ್ಟಿದ್ದಾರೆ.ಅವೆಲ್ಲ ಅಂಶಗಳನ್ನು ನಾನು ಹೇಳಿದ್ದೇನೆ. ವೈಟ್ನರ್ ಹಾಕಿರುವ ಪುಟವನ್ನು ಮಾಹಿತಿ ಬಗ್ಗೆ ಸಿಎಂ ಕೋರ್ಟ್ ಗೆ ಕೊಟ್ಟಿಲ್ಲ, ಈ ಬಗ್ಗೆ ಮಾಹಿತಿ ನೀಡಿದ್ದೇನೆ.
ಅಲ್ಲದೆ ಪದೇ ಪದೇ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಲೋಕಾಯುಕ್ತ ಕಚೇರಿಗೆ ಬರ್ತಾರೆ. ಪ್ರಭಾವ ಬಿರುತ್ತಿದ್ದಾರೆ ಅಂತ ಅನ್ನಿಸುತ್ತಿದೆ. ಸಿಎಂ ಕೂಡ ಹೋದ ಕಡೆಯೆಲ್ಲಾ ಪ್ರಚಾರಗಳಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಡ್ತಿದ್ದಾರೆ. ಇದರಿಂದ ನನಗೆ, ನನ್ನ ಕುಟುಂಬಕ್ಕೆ ಭಯವಿದೆ ಎಂದಿದ್ದಾರೆ.
ಇನ್ನು ಲೋಕಾಯುಕ್ತ ಕಚೇರಿಯಲ್ಲಿ ಸಿಸಿಟಿವಿ ಇಲ್ಲ, ಸುಪ್ರೀಂ ಕೋರ್ಟ್ ಸೂಚನೆಯಂತೆ ಲೋಕಾಯುಕ್ತಕ್ಕೆ ಸಿಸಿ ಟಿವಿ ಅಳವಡಿಕೆ ಮಾಡಿ ಎಂದಿದ್ದೇನೆ. ಅಧಿಕಾರಿಗಳು ಈ ವಿಚಾರವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೈಸೂರಿನಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ.