ಮೈಸೂರು: ಸಿಎಂ ಸಿದ್ದರಾಮಯ್ಯ ಕುರ್ಚಿಯನ್ನು ಬುಡಮೇಲು ಮಾಡಲು ಹೊರಟಿರುವ ಮುಡಾ ಬಹುಕೋಟಿ ಹಗರಣ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಸದ್ಯಕ್ಕಿಲ್ಲ ಲೋಕಾಯುಕ್ತ ಅಧಿಕಾರಿಗಳ ತಲೆಬಿಸಿ. ಮುಡಾ ಹಗರಣದಲ್ಲಿ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯಗೆ ಪ್ರಕರಣದ ವಿಚಾರಣೆ ವಿಳಂಬವಾಗುವ ಸಾಧ್ಯತೆ ಹೆಚ್ಚಿದ್ದು, ವಿಚಾರಣೆ ತಲೆನೋವು ಸಿಎಂಗೆ ಸದ್ಯಕ್ಕಿಲ್ಲ ಎನ್ನಲಾಗ್ತಿದೆ.
ಮುಡಾದ 50:50 ಅನುಪಾತದಡಿಯ ನಿವೇಶನ ಹಂಚಿಕೆಯ ಬಹುಕೋಟಿ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ A1 ಆರೋಪಿಯಾಗಿದ್ದರೆ, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಎ2 ಆರೋಪಿಯಾಗಿದ್ದಾರೆ. ಕೋರ್ಟ್ ಆದೇಶದಂತೆ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣದ ಕುರಿತಂತೆ ನಾಲ್ವರ ಮೇಲೆ FIR ದಾಖಲಾಗಿದ್ದು, ಈಗಾಗಲೇ ಮೈಸೂರು ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಇದುವರೆಗೂ ಪ್ರಕರಣದ ಎ3, ಎ4 ಆರೋಪಿ ವಿಚಾರಣೆ ನಡೆಸಿರುವ ಅಧಿಕಾರಿಗಳು, ದೂರುದಾರರಾದ RTI ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರೊಡನೆ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ಹಲವು ದಾಖಲೆಗಳನ್ನು ಸಹ ಸಂಗ್ರಹ ಮಾಡುತ್ತಿದ್ದಾರೆ.
ಇದೀಗ ಮುಡಾ ಅಧಿಕಾರಿಗಳ ವಿಚಾರಣೆ ಪ್ರಾರಂಭಿಸಿರುವ ಲೋಕಾಯುಕ್ತ ಅಧಿಕಾರಿಗಳು. ಮುಡಾ ಅಧಿಕಾರಿಗಳ ವಿಚಾರಣೆ ನಂತರ ದಾಖಲೆಗಳ ಸಂಗ್ರಹವನ್ನು ಮಾಡಲಿದ್ದಾರೆ. ಬಳಿಕ ಸಿಎಂ, ಸಿಎಂ ಪತ್ನಿ ವಿಚಾರಣೆ ನಡೆಸಲಿರುವ ಲೋಕಾಯುಕ್ತ ಅಧಿಕಾರಿಗಳಿಗೆ, ಸದ್ಯ ದಾಖಲೆಗಳ ಸಂಗ್ರಹವೇ ಬಹು ದೊಡ್ಡ ಸವಾಲಾಗಿದೆ ಎಂದು ಹೇಳಲಾಗ್ತಿದೆ. ಮುಡಾ, ಕಂದಾಯ ಇಲಾಖೆ, ಸರ್ವೇ ಇಲಾಖೆ, ಭೂ ದಾಖಲೆ, ಸಬ್ ರಿಜಿಸ್ಟ್ರಾರ್ ಸೇರಿದಂತೆ ಹಲವು ಕಡೆಗಳಲ್ಲಿ ದಾಖಲೆಗಳನ್ನು ಸಂಗ್ರಹಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲೆಗಳ ಸಂಗ್ರಹದ ನಂತರವಷ್ಟೇ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಪತ್ನಿ ಪಾರ್ವತಿ ವಿಚಾರಣೆಗೆ ಮುಂದಾಗಲಿದ್ದಾರೆ ಹೀಗಾಗಿ ಸಿಎಂ ಮತ್ತು ಪತ್ನಿ ಪಾರ್ವತಿ ವಿಚಾರಣೆ ವಿಳಂಬ ಆಗುವ ಸಾಧ್ಯತೆ ಇದೆ.