ಮೈಸೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ ಸಂಬಂಧ ನಿನ್ನೆ(ಅ.18) ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ, ನಿನ್ನೆ ತಡರಾತ್ರಿಯವರೆಗು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಮೈಸೂರಿನಲ್ಲಿಯೇ ಬೀಡು ಬಿಟ್ಟಿರುವ ಇಡಿ ಅಧಿಕಾರಿಗಳು ಇಂದೂ ಕೂಡ ಮುಡಾ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.
ನಿನ್ನೆ ಬೆಳಿಗ್ಗೆ 11 ರ ಆಸುಪಾಸಿನಲ್ಲಿ ಮುಡಾ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿದ ED ಅಧಿಕಾರಿಗಳು. ತಡರಾತ್ರಿ 11.30 ರ ತನಕ ತನಿಖೆ ನಡೆಸಿದ್ದಾರೆ. ಇಂದು ಬೆಳಿಗ್ಗೆ ಕೂಡ ಮುಡಾಗೆ ಮರಳಿ ಆಗಮಿಸಿರುವ ಇಡಿ ಅಧಿಕಾರಿಗಳು ಇಂದೂ ಕೂಡ ಶೋಧ ಕಾರ್ಯ ನಡೆಸಲಿದ್ದಾರೆ. ಶತಯಗತಾಯ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಕೊಂಡು ಹೋಗಬೇಕೆಂದು ಇಡಿ ಅಧಿಕಾರಿಗಳ ತಂಡ ನಿರ್ಧಾರ ಮಾಡಿದಂತಿದೆ. ವೈಟ್ನರ್ ಹಾಕಿದ್ದ ಮೂಲ ದಾಖಲಾತಿಯನ್ನ ಇಡಿ ಅಧಿಕಾರಿಗಳು ಶೋಧಿಸುತ್ತಿದ್ದು ಈ ಸಂಬಂಧ ಮುಡಾ ಆಯುಕ್ತ ರಘುನಂದನ್ ಅವರುವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಯಾವುದೇ ದಾಖಲಾತಿಗಳ ಕಳ್ಳತನ ಆಗಬಾರದು ಎಂದು ಟೈಟ್ ಸೆಕ್ಯುರಿಟಿ ಇಡಲಾಗಿದ್ದು, ಸಿಆರ್ ಪಿಎಫ್ ಯೋಧರಿಂದ ಮುಡಾಗೆ ಭದ್ರತೆ ನೀಡಲಾಗಿದೆ. ಸ್ಥಳದಲ್ಲಿಯೇ ಬೀಡು ಬಿಟ್ಟಿರುವ ಸಿಆರ್ ಪಿಎಫ್ ಪೊಲೀಸರು ಮೂರು ಹೊತ್ತು ಊಟ ತಿಂಡಿ ತರಿಸಿಕೊಂಡು ಅಲ್ಲಿಯೇ ವಾಸ್ತವ್ಯ ಹೂಡಿ, ಹಾಸಿಗೆ, ದಿಂಬು, ರಗ್ಗು ತರಿಸಿಕೊಂಡು ಮಲಗಿದ್ದಾರೆ.