ಹುಬ್ಬಳ್ಳಿ : ಬೈ ಎಲೆಕ್ಷನ್ ಘೋಷಣೆ ಆದಾಗಿನಿಂದಲೂ ಚನ್ನಪಟ್ಟಣ ಟಿಕೆಟ್ ಜಟಾಪಟಿ ಜೋರಿದ್ದು, ಮೈತ್ರಿ ಸರ್ಕಾರದಲ್ಲೀಗ ಚನ್ನಪಟ್ಟಣ ಅಭ್ಯರ್ಥಿಯ ಆಯ್ಕೆಯೇ ದೊಡ್ಡ ಸವಾಲಾಗಿದೆ. ಬಿಜೆಪಿಗೆ ಟಿಕೆಟ್ ಬೇಕು ಎಂದು ಒಂದೆಡೆಯಾದರೆ, ಚನ್ನಪಟ್ಟಣದಲ್ಲಿ ಜೆಡಿಎಸ್ ಟಿಕೆಟ್ ಪಡೆದು, ಜಯಭೇರಿ ಬಾರಿಸಿಯೇ ತೀರುತ್ತೇವೆಂಬ ಪಟ್ಟು ಇನ್ನೊಂದೆಡೆ. ಇದೀಗ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೇಸರಿ ನಾಯಕರು ಟಿಕೆಟ್ ಗಾಗಿ ಕೌಂಟರ್ ಕೊಡುತ್ತಿದ್ದಾರೆ.
ಜೆಡಿಎಸ್ ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಹೀಗಾಗಿ ಹೆಚ್. ಡಿ ಕುಮಾರಸ್ವಾಮಿ ಚನ್ನಪಟ್ಟಣ ಟಿಕೆಟ್ ತ್ಯಾಗ ಮಾಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಮಗೆ ಹೆಚ್.ಡಿ ಕುಮಾರಸ್ವಾಮಿ ಸಹಾಯಬೇಕು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಶಕ್ತಿ ಬೇಕು. ಮೈತ್ರಿಯಿಂದ ಎರಡೂ ಪಕ್ಷದವರಿಗೆ ಲಾಭ ಆಗಿದೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂಬುದು ಮುಖ್ಯ. ನಾವು ಜೆಡಿಎಸ್ ಗೆ ಪುನರ್ಜನ್ಮ ಕೊಟ್ಟಿದ್ದೇವೆ. ಹೀಗಾಗಿ ಕುಮಾರಸ್ವಾಮಿ ಟಿಕೆಟ್ ತ್ಯಾಗ ಮಾಡಬೇಕು ಎಂದು ಹೇಳಿದರು. ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಕುರಿತು ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೇ ಕೇಸ್ ಹಿಂಪಡೆಯಬಾರದು ಒಂದು ವೇಳೇ ಕೇಸ್ ಹಿಂಪಡೆದರೆ ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಯತ್ನಾಳ್ ತಿಳಿಸಿದರು.