ಮೈಸೂರು: ಸಿಎಂ ಸಿದ್ದರಾಮಯ್ಯಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಏಕಕಾಲಕ್ಕೆ ಎರಡೆರಡು ಕಡೆ ವಿಚಾರಣೆ ತೀವ್ರಗೊಂಡಿದ್ದು. ಮುಡಾ ಹಗರಣ ಸಂಬಂಧ ಇಡಿ ಮತ್ತು ಲೋಕಾಯುಕ್ತ ಎರಡೂ ತಂಡಗಳ ತನಿಖೆ ಚುರುಕುಗೊಂಡಿದ್ದು, ಇಂದು ರಾಯಚೂರು ಲೋಕಾಸಭಾ ಕ್ಷೇತ್ರದ ಸಂಸದ ಜಿ ಕುಮಾರನಾಯ್ಕ ಅವರನ್ನು ಲೋಕಾಯುಕ್ತ ತಂಡ ವಿಚಾರಣೆ ನಡೆಸಿದೆ.
ನಿನ್ನೆ ಮುಡಾ ಕಚೇರಿಗೆ ಇಡಿ ತಂಡ ದಿಢೀರ್ ದಾಳಿ ನಡೆಸಿದ ಬೆನ್ನಲ್ಲೇ ಇಂದು ಲೋಕಾಯುಕ್ತದಲ್ಲೂ ಮುಡಾ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಮೈಸೂರು ಲೋಕಾಯುಕ್ತ ಎಸ್ಪಿ ಟಿ ಜೆ ಉದೇಶ್ ಅವರಿಂದ ವಿಚಾರಣೆ ಮುಂದುವರಿದಿದೆ. ಮುಡಾದಲ್ಲಿ 50:50 ಅನುಪಾತದಡಿ ನಿವೇಶನ ಹಂಚಿಕೆ ಮಾಡುವಾಗ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ, ಹಾಗೂ ಇಂದು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿರುವ ಜಿ ಕುಮಾರನಾಯ್ಕ ಅವರನ್ನು ವಿಚಾರಣೆ ನಡೆಸಲಾಗಿದೆ. ಕೆಸರೆಯ ವಿವಾದಿತ ಜಮೀನು ಭೂ ಪರಿವರ್ತನೆ ಮಾಡಿದ ವೇಳೆ, ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿ ಕುಮಾರನಾಯ್ಕ ಅವರನ್ನು ಇಂದು ವಿಚಾರಣೆಗೆ ಒಳಪಡಿಸಿದ್ದು. ಸುಮಾರು ಮೂರು ತಾಸುಗಳ ಕಾಲ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಪ್ರಕರಣ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿ, ಮಾಹಿತಿ ಕಲೆ ಹಾಕಿದ್ದಾರೆ.