ಬಾಗಲಕೋಟೆ: ಮೀಸಲಾತಿ ಬಗ್ಗೆ ಶಾಸಕರೊಬ್ಬರ ವಿವಾದಾತ್ಮಕ ಹೇಳಿಕೆ ವಿಡಿಯೋ ವೈರಲ್ ಆಗಿದೆ. ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಜಮಖಂಡಿ ಬಿಜೆಪಿ ಶಾಸಕ ಜಗದೀಶ್ “ಕುಲಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ. ‘ಕುಲಕುಲವೆಂದು ಬಡಿದಾಡದಿರಿ, ಕುಲದ ನೆಲೆಯನ್ನೇನಾದ್ರೂ ಬಲ್ಲಿರಾ? ಹಾಗೇ ನೋಡಿದರೆ ಕುಲ ಎನ್ನುವುದು ಇಲ್ಲವೇ ಇಲ್ಲ. ಏನಾದರು ಸಿಗುತ್ತೆ ಅಂತ ಮೀಸಲಾತಿ ಸಂಬಂಧ ಬಡಿದಾಟ ನಡೀತಿದೆ. ಮೀಸಲಾತಿ ತೆಗೆಯಿರಿ, ಎಲ್ಲರೂ ಟಾಪ್ ಕ್ಲಾಸ್ನಲ್ಲಿ ಬಂದುಬಿಡುತ್ತೀರಾ” ಎಂದು ಹೇಳಿದ್ದಾರೆ. ಶಾಸಕ ಜಗದೀಶ್ ಹೇಳಿಕೆಯನ್ನು ದಲಿತಪರ ಸಂಘಟನೆ ಖಂಡಿಸಿದೆ. ಸಂಘಟನೆ ಕಾರ್ಯಕರ್ತರು ರಾತ್ರೋರಾತ್ರಿ ಬಿಜೆಪಿ ಶಾಸಕ ಜಗದೀಶ್ ಮನೆಗೆ ಮುತ್ತಿಗೆಗೆ ಯತ್ನಿಸಿದರು. ಜಮಖಂಡಿಯಲ್ಲಿ ಪ್ರತಿಭಟನೆ ನಡೆಸಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.