ಬೆಂಗಳೂರು: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನು 25ಕ್ಕೂ ಹೆಚ್ಚು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾದ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಫರಿದಾ ಖಾತೂನ್ ಕೊಲೆಯಾದ ಮಹಿಳೆ. ಗಿರೀಶ್ @ ರೆಹಾನ್ ಕೊಲೆ ಮಾಡಿದ ಆರೋಪಿ.
ಬೆಂಗಳೂರಿನಲ್ಲಿ ಸ್ಪಾವೊಂದರಲ್ಲಿ ಕೆಲಸ ಮಾಡ್ತಿದ್ದ 42 ವರ್ಷದ ಫರಿದಾ ಗಂಡನಿಗೆ ಡಿವೋರ್ಸ್ ಕೊಟ್ಟು ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದು ನೆಲೆಸಿ ಹೊಸ ಜೀವನ ಕಟ್ಟಿಕೊಂಡಿದ್ದಳು. ಫರಿದಾಗೆ 22 ವರ್ಷದ ಮಗಳು ಕೂಡ ಇದ್ದಾಳೆ. ಇನ್ನು ಮೂಲತಃ ಬೆಂಗಳೂರು ಯಡಿಯೂರು ನಿವಾಸಿಯಾಗಿರುವ 32 ವರ್ಷದ ಗಿರೀಶ್ ಸ್ಪೇರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ಒಮ್ಮೆ ಮಸಾಜ್ ಮಾಡಿಸಿಕೊಳ್ಳಲು ಸ್ಪಾಗೆ ಹೋದಾಗ ಫರಿದಾ ಪರಿಚಯವಾಗಿತ್ತು. 2022ರಲ್ಲಿ ಗಿರೀಶ್ ಹಾಗೂ ಫರಿದಾಗೆ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಅಂದಿನಿಂದ ಫರಿದಾ ಜೊತೆಗೆ ಗಿರೀಶ್ ಸಂಪರ್ಕ ಬೆಳೆಸಿದ್ದ. ಅಲ್ಲದೆ ಇವರ ನಡುವೆ ದೈಹಿಕ ಸಂಪರ್ಕ ಸಹ ಆಗಿತ್ತು.
ಈಗಾಗಲೇ ಮದುವೆಯಾಗಿ ಗಂಡನಿಂದ ಡಿವೋರ್ಸ್ ಪಡೆದಿದ್ದ ಫರಿದಾಗೆ ಗಿರೀಶ್ ಮದುವೆಯಾಗುವಂತೆ ಪೀಡಿಸುತ್ತಿದ್ದ. ಒಂದು ಕಡೆ ಡಿವೋರ್ಸ್ ಬಳಿಕ ಗಂಡ ತೀರಿಕೊಂಡ ನೋವು ಹಾಗೂ ತನಗೆ 22 ವರ್ಷದ ಮಗಳಿದ್ದಾಳೆ ಎಂಬ ಚಿಂತೆಯಲ್ಲಿದ್ದ ಫರಿದಾ ಗಿರೀಶ್ ಜೊತೆ ಮದುವೆಯಾಗಲು ನಿರಾಕರಿಸಿದ್ದಳು. ಮಾರ್ಚ್ 30 ರಂದು ಕೂಡ ಫರಿದಾಳನ್ನು ಕರೆದುಕೊಂಡು ಶಾಲಿನಿ ಗ್ರೌಂಡ್ ಗೆ ಬಂದಿದ್ದ. ನಾವು ಮದುವೆ ಆಗೋಣ, ಈ ಕೆಲಸ ಎಲ್ಲಾ ಬಿಡು ಎಂದು ಮನವಿ ಮಾಡಿದ್ದ. ಆದರೆ ಫರಿದಾ ಇದಕ್ಕೆ ಒಪ್ಪದಿದ್ದಾಗ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಲ್ಲದೆ ದೇಹದ ವಿವಿಧೆಡೆ 25ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಆತನ ಕೋಪಕ್ಕೆ ಫರಿದಾ ಕರಳು ಕೂಡ ಆಚೆ ಬಂದಿತ್ತು. ಕೊಲೆ ಬಳಿಕ ಪೊಲೀಸ್ ಠಾಣೆಗೆ ಬಂದು ಗಿರೀಶ್ ಶರಣಾಗಿದ್ದಾನೆ.