– ಮಾವುತರು, ಕಾವಾಡಿಗಳ ಮಕ್ಕಳಿಗೆ ಬೋಧನೆ
– ಅರಮನೆ ಅಂಗಳದಲ್ಲಿ ತೆರೆಯಲಾಗಿರುವ ಶಾಲೆ
ಪ್ರತಿನಿಧಿ ವರದಿ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ತನ್ನ ಶ್ರೀಮಂತ ಸಂಪ್ರದಾಯ, ರೋಮಾಂಚನ ಉತ್ಸವಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಈ ಆಚರಣೆಯಲ್ಲಿ ಜಂಬೂಸವಾರಿ ಹೃದಯ ಸ್ಥಾನ ಪಡೆದುಕೊಂಡಿದೆ ಎಂದರೆ ತಪ್ಪಾಗದು. ರಾಜವೈಭವದಿಂದ ಜಂಬೂಸವಾರಿಯಲ್ಲಿ ಕಂಗೊಳಿಸುವ ಗಜಪಡೆ, ಶತಮಾನದ ಪರಂಪರೆಯ ಹಿರಿಮೆಯನ್ನು ಸಾರುವ ಮೆರವಣಿಗೆಯನ್ನು ಮುನ್ನಡೆಸುತ್ತದೆ. ಈ ಸಾಂಪ್ರದಾಯಿಕ ಆಚರಣೆಯ ಹಿಂದೆ ಆನೆಯ ಪಾಲಕರಾದ ಮಾವುತ ಹಾಗೂ ಕಾವಾಡಿ ಕುಟುಂಬಗಳ ದಣಿವರಿಯದ ಪ್ರಯತ್ನ ಅಡಗಿದೆ.
ಜಂಬೂಸವಾರಿಗೆ ಸತತ ಎರಡು ತಿಂಗಳ ಮೊದಲಿನಿಂದಲೇ ಸಿದ್ಧತೆ ನಡೆಯುತ್ತದೆ. ಇದಕ್ಕಾಗಿ ಕಾಡಿನಿಂದ ನಾಡಿಗೆ ಬರುವ ಮಾವುತ ಹಾಗೂ ಕಾವಾಡಿಗಳ ಮಕ್ಕಳು ಅರಮನೆಯಲ್ಲಿಯೇ ನೆಲೆಯೂರುತ್ತಾರೆ. ಹೀಗೆ ತಿಂಗಳುಗಳ ಕಾಲ ಅರಮನೆ ಅಂಗಳದಲ್ಲಿ ವಾಸ್ತವ್ಯ ಹೂಡುವ ಮೂಲಕ ಜಂಬೂಸವಾರಿಯ ಯಶಸ್ಸಿಗೆ ಶ್ರಮಿಸುವ ಮಾವುತರು, ಕಾವಾಡಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಟೆಂಟ್ ಶಾಲೆ ನಡೆಸಲಿದ್ದು, ಆ ಮೂಲಕ ಮಕ್ಕಳಿಗೆ ಅಕ್ಷರ ಕಲಿಸಲಾಗುತ್ತದೆ. 17 ವರ್ಷಗಳ ಹಿಂದೆ ಪ್ರಾರಂಭಗೊಂಡ ಟೆಂಟ್ ಶಾಲೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದಿದ್ದು ತಾತ್ಕಾಲಿಕ ಶಾಲೆಯಾಗಿ ಮಾರ್ಪಟ್ಟಿದೆ. ಕಳೆದ 2 ವರ್ಷದಿಂದ ಮಕ್ಕಳ ಕಲಿಕೆಗಾಗಿಯೇ ಅರಮನೆಯ ಜಯಮಾರ್ತಾಂಡ ದ್ವಾರದ ಪಕ್ಕದ ಕಟ್ಟಡದಲ್ಲಿ ಕೊಠಡಿಯೊಂದನ್ನು ನಿಯೋಜಿಸಲಾಗಿದೆ.
3 ಶಿಕ್ಷಕಿಯರಿಂದ ಬೋಧನೆ: ಒಂದೆಡೆ ನಾಡಹಬ್ಬ ದಸರಾ ಉತ್ಸವದ ತಯಾರಿಯಲ್ಲಿ ಪೋಷಕರು ಗಜಪಡೆ ತಾಲೀಮು ಹಾಗೂ ಇತರ ಕಾರ್ಯಗಳಲ್ಲಿ ತೊಡಗಿದರೆ, ಇತ್ತ ಅವರ ಮಕ್ಕಳು ಕಲಿಕೆಯಲ್ಲಿ ನಿರತರಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆಯುವ ಈ ಶಾಲೆಯಲ್ಲಿ 3 ಶಿಕ್ಷಕಿಯರಿಂದ ಬೋಧನೆ ನಡೆಯುತ್ತಿದೆ. 1ರಿಂದ 10ನೇ ತರಗತಿಯ 20ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಕರಾದ ನೂರ್ಫಾತಿಮಾ, ಮೌಸೀನ್ ತಾಜ್ ಹಾಗೂ ದಿವ್ಯಾ ಪ್ರಿಯದರ್ಶಿನಿ ಅವರುಗಳು ಅಕ್ಷರ ಕಲಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಶಾಲೆ ಆರಂಭವಾಗಿ 20 ದಿನವಾಗಿದ್ದು, ಪ್ರತಿದಿನ ಬೆಳಗ್ಗೆ 9.45ರಿಂದ ಮಧ್ಯಾಹ್ನ 3:30ರವರೆಗೆ ತರಗತಿಗಳು ನಡೆಯಲಿದೆ. ಶಾಲೆಗೆ ದಾಖಲಾಗುವ ಮಕ್ಕಳನ್ನು ತರಗತಿವಾರು ವಿಂಗಡಿಸಿ, ಮುಖ್ಯವಾದ ವಿಷಯಗಳನ್ನು ಬೋಧಿಸಲಾಗುತ್ತದೆ. ಎಲ್ಲ ಶಾಲೆಗಳಂತೆ ಶನಿವಾರ ಅರ್ಧದಿನ ಹಾಗೂ ಭಾನುವಾರ ರಜೆ ಇರಲಿದ್ದು, ಈ ಮಕ್ಕಳಿಗೆ ಇಸ್ಕಾನ್ ವತಿಯಿಂದ ಪ್ರತಿನಿತ್ಯ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಕಳೆದ ಬಾರಿ ಕಾಡಿನಿಂದ ನಾಡಿಗೆ ಬಂದ ಮಕ್ಕಳಿಗೆ ಅರಣ್ಯ ಇಲಾಖೆಯಿಂದ ವಿವಿಧ ಪ್ರವಾಸಿ ತಾಣಗಳಾದ ಮೇಲುಕೋಟೆ, ರಂಗನತಿಟ್ಟು, ಅಕ್ಕತಂಗಿ ಕೊಳ, ಧನುಷ್ಕೋಟಿ ಇನ್ನಿತರ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ಬಾರಿಯೂ ಸಹ ಪ್ರವಾಸ ಸ್ಥಳಗಳಿಗೆ ಭೇಟಿ ನೀಡುವ ಯೋಜನೆ ಇದೆ.
ಚಟುವಟಿಕೆ ಆಧಾರಿತ ಶಿಕ್ಷಣ:
ಮಕ್ಕಳಿಗೆ ಕಲಿಕಾ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಶಾಲೆಯಲ್ಲಿ ಚಾಟ್೯, ಚಿತ್ರಣ, ಭೂಪಟ ಹಾಗೂ ಇನ್ನಿತರ ಭಿತ್ತಿಪತ್ರಗಳನ್ನು ತಂದಿಟ್ಟು ಮಕಳನ್ನು ಆಕರ್ಷಿಸುವಂತೆ ಮಾಡಲಾಗಿದೆ. ಇದರ ಜತೆಯಲ್ಲಿ ಸ್ವತಃ ಶಿಕ್ಷಕರೇ ತಮ್ಮ ಲ್ಯಾಪ್ ಟಾಪ್ಗಳನ್ನು ಶಾಲೆಗೆ ತಂದು ತಂತ್ರಜ್ಞಾನ ಕಲಿಕೆಗೂ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.
ಮಕ್ಕಳ ದಸರಾಕ್ಕೂ ಸಿದ್ಧತೆ: ಈ ಮಕ್ಕಳು ನಿತ್ಯದ ಕಲಿಕೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಿಯಲ್ಲೂ ತೊಡಗಿಸಿಕೊಳ್ಳುತ್ತಾರೆ. ದಸರೆಯ ಅಂಗವಾಗಿ ನಡೆಯುವ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಹಾಡು, ನೃತ್ಯ, ನಾಟಕದ ಜತೆಗೆ ತಾವು ಕಾಡಿನಲ್ಲಿ ಕಲಿತ ಗೀತೆಗಳ ಪ್ರದರ್ಶನ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಸಿದ್ಧತೆಗೆ ಸಹಕಾರ ನೀಡಲು ಶಾಲೆಯಲ್ಲಿ ಸ್ಪೀಕರ್ಗಳನ್ನು ಕೂಡ ಅಳವಡಿಸಲಾಗಿದ್ದು, ಮಕ್ಕಳ ದಸಾರಕ್ಕೆ ಈ ಮಕ್ಕಳಿಂದ ಒಂದು ಗಂಟೆಯ ಕಾರ್ಯಕ್ರಮಗಳು ನಡೆಯಲಿದೆ.
ಆಯುಷ್ನಿಂದ ಸೌಲಭ್ಯ:
ಕಾಡಿನಿಂದ ಬಂದ ಮಕ್ಕಳ ಆರೋಗ್ಯದಲ್ಲಿ ಯಾವುದೇ ಏರುಪೇರು ಆಗದಂತೆ ಆಯುಷ್ ಇಲಾಖೆ ಕ್ರಮ ವಹಿಸಲಿದೆ. ಮಕ್ಕಳ ಎತ್ತರ, ತೂಕ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ಮಾಡಿ ಆರೋಗ್ಯ ತೊಂದರೆ ಇದಲ್ಲಿ ಸೂಕ್ತ ಔಷಧವನ್ನು ನೀಡಲಾಗುತ್ತಿದೆ.
=====================
ತಾತ್ಕಾಲಿಕ ಶಾಲೆಯಲ್ಲಿ ಮೂರು ವರ್ಷದಿಂದ ಕಾರ್ಯನಿರ್ವಾಹಿಸುತ್ತಿದ್ದೇನೆ. ಮಕ್ಕಳ ಕಲಿಕೆಗೆ ಯಾವುದೇ ತೊಂದರೆ ಆಗಬಾರದು ಎಂಬುದು ಶಾಲೆಯ ಉದ್ದೇಶ. ಶಾಲೆಯಲ್ಲಿ ಯಾವುದೇ ಕಟ್ಟುನಿಟ್ಟಿನ ನಿರ್ಬಂಧ ಇಲ್ಲದ ಕಾರಣ ಇಲ್ಲಿಗೆ ಬರುವ ಮಕ್ಕಳು ಏನೇ ಹೇಳಿಕೊಟ್ಟರೂ ಉತ್ತಮವಾಗಿ ಸ್ಪಂದಿಸುತ್ತಾರೆ. ಎರಡು ತಿಂಗಳು ಕಲಿತು ಹೋಗುವಾಗ, ಇವರೆಲ್ಲಾ ಸ್ವಂತ ಮಕ್ಕಳೆಂಬ ಬಾಂಧವ್ಯ ಇರುತ್ತದೆ.
– ಎಸ್.ಕೆ. ಮಂಜುಳಾ- ನೋಡಲ್ ಅಧಿಕಾರಿ
————-
ಕಲಿಕೆಗೆ ಮಕ್ಕಳನ್ನು ಆಕರ್ಷಿಸಲು ಶಾಲೆಯನ್ನು ಚಾರ್ಟ್ಗಳಿಂದ ಸಿಂಗರಿಸಲಾಗಿದೆ. ಮಕ್ಕಳ ಕಲಿಕೆಯ ಆಸಕ್ತಿ ಹೆಚ್ಚಿಸಲು ʻರೀಡಿಂಗ್ ಕಾರ್ನರ್ʼ ಕಲ್ಪಿಸಿದ್ದು ಹಲವು ಕಥೆ ಪುಸ್ತಕಗಳು, ದಿನಪತ್ರಿಕೆ ಇಡಲಾಗಿದೆ. ಈ ಸೌಲಭ್ಯದಿಂದ ಮಕ್ಕಳೊಂದಿಗೆ ಅವರ ಪೋಷಕರು ಸಹ ಶಾಲೆಗೆ ಬಂದು ಆಸಕ್ತಿಯಿಂದ ಓದುವುದು ಸಂತಸ ಮೂಡಿಸಿದೆ.
– ಮೂಸಿನ್ ತಾಜ್, ಶಿಕ್ಷಕಿ
—————
ನಾನು 5ನೇ ತರಗತಿಯಲ್ಲಿ ಓದುತ್ತಿದ್ದು, ನಮ್ಮ ಊರಿನ ಶಾಲೆಗಿಂತ ಈ ಶಾಲೆ ತುಂಬಾ ಇಷ್ಟವಾಗಲಿದೆ. ನಮಗೆ ಬ್ಯಾಗ್, ಸಮವಸ್ತ್ರ, ಪುಸ್ತಕಗಳನ್ನು ನೀಡಿರುವುದು ಖುಷಿಯಾಗಿದೆ. ಪ್ರತಿವರ್ಷ ಇಲ್ಲಿಗೆ ಬಂದಾಗ ಹೊಸ ಹೊಸ ಸ್ನೇಹಿತರು ಸಿಗುತ್ತಾರೆ, ಅರಮನೆ ಆವರಣದಲ್ಲಿ ಆಟವಾಡುತ್ತಾ ಕಲಿಯುವುದು ನಮಗೆಲ್ಲಾ ಖುಷಿ ನೀಡುತ್ತದೆ.
– ಅಭಿ