ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಪಿಎಚ್ಸಿ ಆಸ್ಪತ್ರೆಯ ಹೊಸ ಕಟ್ಟಡದ ಹಿಂದೆ ಬೇವಿನ ಮರಕ್ಕೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಳಂದೂರು ತಾಲೂಕಿನ ಹೊನ್ನೂರು ಬೀಚಳ್ಳಿ ನಿವಾಸಿ ನಿಂಗರಾಜು(38) ಮೃತ ವ್ಯಕ್ತಿ. ತವರೂರು ದೊಡ್ಡಿಂದುವಾಡಿಗೆ ಇಬ್ಬರು ಮಕ್ಕಳೊಂದಿಗೆ ಗೌರಿ ಹಬ್ಬಕ್ಕೆ ಬಂದಿದ್ದ ತನ್ನ ಪತ್ನಿ ಶಿಲ್ಪಳನ್ನು ಭೇಟಿಯಾಗಲು ಶುಕ್ರವಾರ ಸಂಜೆ ಪಾನಮತ್ತನಾಗಿ ಬಂದಿದ್ದ ಮೃತ ನಿಂಗರಾಜು, ಊಟ ಮುಗಿಸಿ ನಂತರ ತನ್ನ ಸ್ನೇಹಿತರು ಹೊನ್ನೂರು ಬೀಚಳ್ಳಿಯಲ್ಲಿ ಮಾಂಸದ ಅಡುಗೆ ಮಾಡಿದ್ದಾರೆ. ಅಲ್ಲಿಗೆ ಊಟಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದನು.
ಈ ನಡುವೆ ಮಾರನೇ ದಿನ ಶನಿವಾರ ಬೆಳಗ್ಗೆ 9.30 ಗಂಟೆ ಸಮಯದಲ್ಲಿ ದೊಡ್ಡಿಂದುವಾಡಿ ಗ್ರಾಮದ ಗಣಪತಿ ಕೂರಿಸುವ ಹುಡುಗರು ಹೊಂಗೆ ಹಾಗೂ ಬೇವಿನ ಸೊಪ್ಪು ಕೀಳಲು ಹೋದಾಗ ಪಿಎಚ್ಸಿ ಆಸ್ಪತ್ರೆ ಹೊಸ ಕಟ್ಟಡದ ಹಿಂದೆ ಇರುವ ಬೇವಿನ ಮರಕ್ಕೆ ಯಾರೋ ನೇಣು ಬಿಗಿದುಕೊಂಡು ಸತ್ತಿರುವುದು ಗೊತ್ತಾಗಿದೆ.
ಪರಿಶೀಲಿಸಲಾಗಿ ಮೃತ ವ್ಯಕ್ತಿ ನಿಂಗರಾಜು ಎಂಬುದು ಖಚಿತವಾಗಿದ್ದು, ಈ ಕುರಿತು ಶಿಲ್ಪ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಹಾಗಾಗಿ, ಘಟನೆ ಕುರಿತು ಗ್ರಾಮಾಂತರ ಠಾಣೆಗೆ ಶಿಲ್ಪ ಹೇಳಿಕೆ ನೀಡಿದ್ದು, ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.