ಎಲ್ಲೆಲ್ಲೂ ಕೇಳುವ ಕುಂದ ಕನ್ನಡ, ಮೂಗಿಗೆ ಬಡಿಯುವ ಮತ್ಸ್ಯಖಾದ್ಯಗಳ ಘಮಲು, ಕೃಷಿ, ಕ್ರೀಡೆ, ಯಕ್ಷಗಾನ, ದೈವದ ಪೂಜೆಯ ಅನಾವರಣ. ಹುರುಪು ಹೆಚ್ಚಿಸುವ ಹುಲಿ ಕುಣಿತ, ಆಟಿಕಳೆಂಜ… ಇದು ದಕ್ಷಿಣ ಕನ್ನಡದ ಯಾವುದೋ ಹಳ್ಳಿಯ ದೃಶ್ಯವಲ್ಲ. ಸಿಲಿಕಾನ್ ಸಿಟಿಯ ಅರಮನೆ ಮೈದಾನದಲ್ಲಿ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದ ಪ್ರಯುಕ್ತ ಸೃಷ್ಟಿಯಾದ ಮಿನಿ ಕರಾವಳಿಯಲ್ಲಿ ಕಂಡ ಕಡಲನಗರಿಯ ಸಂಸ್ಕೃತಿ. ನಗರದ ಅರಮನೆ ಮೈದಾನಕ್ಕೆ ಒಮ್ಮೆ ಪ್ರವೇಶಿಸಿದರೆ ದಕ್ಷಿಣ ಕನ್ನಡದ ಯಾವುದೋ ಊರಿಗೆ ಪ್ರವೇಶ ಮಾಡಿದಂತೆ ತೋರುತ್ತಿದೆ.
ಶನಿವಾರ ದಕ್ಷಿಣ ಕನ್ನಡ ಮಾತ್ರಲ್ಲದೆ ಸಿಲಿಕಾನ್ ಸಿಟಿ ಮಂದಿ ವಾರಾಂತ್ಯದ ದಿನಚರಿಯಾಗಿ ಕಂಬಳದತ್ತ ಹೆಜ್ಜೆ ಹಾಕಿದ್ದರು. ವಿದೇಶಿಗರು ಆಗಮಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ಆಯೋಜಕರಿಂದ ಮಾಹಿತಿ ತಿಳಿಯುವುದು ಕಂಡುಬಂತು. ಶನಿವಾರ ಇಡೀ ದಿನ ಲಕ್ಷಕ್ಕೂ ಹೆಚ್ಚಿನ ಜನ ಆಗಮಿಸಿ ಕಂಬಳವನ್ನು ವೀಕ್ಷಿಸಿದರು. ಅದರಲ್ಲೂ ನಗರದಲ್ಲಿ ನೆಲೆಸಿರುವ ಮಂಗಳೂರು, ಉಡುಪಿಯ ಜನತೆ ತಮ್ಮ ಮನೆ ಹಬ್ಬದಂತೆ ಪಾಲ್ಗೊಂಡು ಸಂಭ್ರಮಿಸಿದರು.