ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ವಿಶ್ವಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕ್ಯಾನ್ಸರ್ ಮತ್ತು ಮಧುಮೇಹ ರೋಗಗಳಿಗೆ, ಸೂಕ್ತವಾದ ಸಾಂಪ್ರದಾಯಿಕ ಪೌಷ್ಟಿಕ ಆಹಾರ ಪದ್ದತಿಯ ಮೂಲಕ ಔಷಧಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ, ಬೆಂಗಳೂರಿನ ಯೂನಿವರ್ಸಿಟಿ ಆಫ್ ಟ್ರಾನ್ಸ್-ಡಿಸಿಪ್ಲಿನರಿ ಹೆಲ್ತ್ ಸೈನ್ಸಸ್ ಅಂಡ್ ಟೆಕ್ನಾಲಜಿ ವಿಶ್ವವಿದ್ಯಾಲಯಗಳು ಮುಂದಾಗಿವೆ.
ಎಸ್ಎಸ್ಎಸ್ಯುಎಚ್ಇ ಸಂಸ್ಥಾಪಕ ಮಧುಸೂದನ ಸಾಯಿ ಮಾತನಾಡಿ, ಈ ಒಪ್ಪಂದವು ಕೆಲ ನಿಯಮಿತ ಸಂಪನ್ಮೂಲಗಳ ವಿನಿಮಯಕ್ಕೆ ಸೀಮಿತವಾಗದೆ, ಜಾಗತಿಕ ವೇದಿಕೆಯಾಗಲಿದೆ. ರೋಗಿಗಳಿಗೆ ಮತ್ತು ಸಮಾಜಕ್ಕೆ ಸಾಧ್ಯವಾದಷ್ಟು ಹೆಚ್ಚಿನ ಆರೋಗ್ಯ ಸೌಲಭ್ಯ ಒದಗಿಸಲು, ವೈವಿಧ್ಯಮಯ ಜ್ಞಾನ ವ್ಯವಸ್ಥೆಗಳು ಮತ್ತು ವಿಜ್ಞಾನ ಕ್ಷೇತ್ರದ ಸಾಧಕರನ್ನು ಒಟ್ಟುಗೂಡಿಸುವ ಗುರಿ ಹೊಂದಿದೆ ಎಂದು ನುಡಿದರು.
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಸಂಸ್ಥಾಪಕ ಶ್ರೀ ಮಧುಸೂದನ ಸಾಯಿ ಅವರಿಂದ ಪ್ರೇರಣೆ ಪಡೆದ ಒಪ್ಪಂದವು ತಮ್ಮ ಪರಿಶ್ರಮದಿಂದ, ಹೊಸ ಮಾದರಿಯ, ಸಂಶೋಧನೆಗಳ ಮೂಲಕ ಜಾಗತಿಕವಾಗಿ ಜನರ ಜೀವನಶೈಲಿಯನ್ನು ಸುಧಾರಿಸಲು ವೈಜ್ಞಾನಿಕ ಜ್ಞಾನವನ್ನು ವೃದ್ಧಿಸುವ ಗುರಿಯನ್ನು ಹೊಂದಿದೆ ಎಂದರು.
ಟಿಡಿಯು ಉಪಕುಲಪತಿ ಡಾ.ದರ್ಶನ್ ಶಂಕರ್ ಮಾತನಾಡಿ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸ್ಥಳೀಯ ಪದ್ಧತಿ ಸೇರಿದಂತೆ ಹಲವು ವಿಭಿನ್ನವಾದ ಜ್ಞಾನ ವ್ಯವಸ್ಥೆಗಳಿದ್ದರೂ, ಹೆಚ್ಚಾಗಿ ಪಾಶ್ಚಿಮಾತ್ಯ ವ್ಯವಸ್ಥೆಯನ್ನು ಬಳಸುತ್ತಿದ್ದೇವೆ. ಆಫ್ರಿಕಾ ಮತ್ತು ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವೈವಿಧ್ಯಮಯ ಸ್ಥಳೀಯ ವ್ಯವಸ್ಥೆಗಳನ್ನು ಹೊಂದಿದ್ದು, ಈ ಒಪ್ಪಂದದ ಮೂಲಕ ನಾವು ಈ ಜ್ಞಾನವನ್ನು ಹೆಚ್ಚು ಪ್ರಚಲಿತ ಮಾಡುವ ನಿಟ್ಟಿನಲ್ಲಿ ಪರಿಶ್ರಮಿಸುವುದಾಗಿ ಹೇಳಿದರು.