ದೊಡ್ಡಬಳ್ಳಾಪುರ, ಜ.16: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಇಂದು ಬ್ರಹ್ಮ ರಥೋತ್ಸವದ ವೇಳೆ ಭಾರೀ ಅನಾಹುತವೊಂದು ತಪ್ಪಿತ್ತು. ರಥದಡಿ ಬಿದ್ದ ಮಹಿಳೆಯನ್ನು ಪೊಲೀಸರು ಹಾಗೂ ಜನರು ಕೂಡಲೇ ಎಳೆದಿದ್ದರಿಂದ ಜೀವ ಉಳಿದಿತ್ತು. ಆದರೆ, ಈ ರಥೋತ್ಸವ ನೋಡಲೆಂದು ತರಾತುರಿಯಲ್ಲಿ ಬಸ್ನಿಂದ ಕೆಳಗೆ ಇಳಿಯುತ್ತಿದ್ದಾಗ ಆಯತಪ್ಪಿ ಚಕ್ರದಡಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಘಾಟಿ ಸಮೀಪದ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್ ಬಳಿ ಬಸ್ನಿಂದ ತರಾತುರಿಯಲ್ಲಿ ಇಳಿಯಲು ಮುಂದಾದಾಗ ಆಯತಪ್ಪಿ ಬಸ್ ಅಡಿ ಬಿದ್ದಿದ್ದಾರೆ. ಈ ವೇಳೆ ಹಿಂಬದಿ ಚಕ್ರ ವ್ಯಕ್ತಿ ಮೇಲೆ ಹರಿದಿದ್ದು, ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ಘಾಟಿ ಸುಬ್ರಹ್ಮಣ್ಯದಲ್ಲಿ ಬ್ರಹ್ಮ ರಥೋತ್ಸವ ನೋಡಲು ಬಂದಿದ್ದ ಎಂದು ತಿಳಿದುಬಂದಿದೆ. ಮೃತನ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.
ಪುಷ್ಯ ಶುದ್ದ ಷಷ್ಟಿ ಹಿನ್ನೆಲೆಯಲ್ಲಿ ಇಂದು ಘಾಟಿ ಸುಬ್ರಮಣ್ಯದಲ್ಲಿ ಬ್ರಹ್ಮ ರಥೋತ್ಸವ ನಡೆಯಿತು. ಮದ್ಯಾಹ್ನ 12.15ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಅದರಂತೆ ರಥ ಎಳೆಯುವ ವೇಳೆ ಭಾರೀ ಜನಜಂಗುಳಿಯಿಂದ ಮಹಿಳೆಯೊಬ್ಬರು ರಥದ ಚಕ್ರದಡಿ ಬಿದಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಹಾಗೂ ಸ್ಥಳೀಯರು ಮಹಿಳೆಯನ್ನು ಎಳೆದಿದ್ದರು. ಪರಿಣಾಮ ಕೂದಲೆಳೆ ಅಂತರದಲ್ಲಿ ಮಹಿಳೆ ಅಪಾಯದಿಂದ ಪಾರಾಗಿದ್ದರು.