ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಭರದ ಸಿದ್ಧತೆ ಸಾಗಿದೆ. ಮೈಸೂರು ದಸರಾ ಎಂದರೆ ಪ್ರತಿಯೊಂದೂ ಆಕರ್ಷಕ. ಇಲ್ಲಿನ ಸಂಸ್ಕೃತಿ, ಆಚರಣೆ, ಪದ್ಧತಿ, ಕಾರ್ಯಕ್ರಮಗಳು ಎಂತಹವರನ್ನು ಮೈಮರೆಸುತ್ತದೆ. ಈ ಎಲ್ಲಾ ಕಾರ್ಯಕ್ರಮಗಳ ನಡುವೆ ಪೊಲೀಸರ ವಾದ್ಯಗೋಷ್ಠಿ ಹಾಗೂ ಇಂಗ್ಲೀಷ್ ಬ್ಯಾಂಡ್ ಜನರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. 1868ರಲ್ಲಿ ಪ್ರಾರಂಭವಾದ ಪೊಲೀಸ್ ಬ್ಯಾಂಡ್ ಸಂಸ್ಕೃತಿ ಇಂದಿಗೂ ಜನಸೂರೆಗೊಂಡಿದೆ. 156 ವರ್ಷಗಳ ಇತಿಹಾಸ ಇರುವ ಪೊಲೀಸ್ ಬ್ಯಾಂಡ್ ನಿನಾದ ನಿನ್ನೆ( ಅ.8) ದಸರಾ ಹಿನ್ನೆಲೆಯಲ್ಲಿ ಅರಮನೆಯಂಗಳದಲ್ಲಿ ಮೊಳಗಿದೆ. ಕರ್ನಾಟಕ ಪೊಲೀಸರಿಂದ ವಾದ್ಯಗೋಷ್ಠಿ ಹಾಗೂ ಇಂಗ್ಲೀಷ್ ಬ್ಯಾಂಡ್ ನಿನಾದ ಅರಮನೆಯಲ್ಲಿ ಮೊಳಗಿದೆ.
ಜಂಬೂ ಸವಾರಿ ಮೆರವಣಿಗೆಯ ಜೊತೆಗೆ ಗಮನ ಸೆಳೆಯುವ ಪೊಲೀಸ್ ಬ್ಯಾಂಡ್ ನ್ನು ನಿನ್ನೆ( ಅ.8) ಅರಮನೆ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಜವಂಶಸ್ಥರು ಸೇರಿದಂತೆ ಸಚಿವ ಸತೀಶ್ ಜಾರಕಿಹೊಳೆ, ಡಾ ಜಿ ಪರಮೇಶ್ವರ್, ಡಾ ಎಚ್ ಸಿ ಮಹದೇವಪ್ಪ, ಶಾಸಕ ತನ್ವೀರ್ ಸೇಠ್ ಸೇರಿದಂತೆ ಹಲವು ಪ್ರಮುಖರು ಕಣ್ತುಂಬಿಕೊಂಡರು. ರಾಜ್ಯದ ಎಲ್ಲಾ ಜಿಲ್ಲೆಯ 300ಕ್ಕೂ ಹೆಚ್ಚು ಕೆಎಸ್ಆರ್ಪಿ ಪೊಲೀಸ್ ಗಳು ಇಂಗ್ಲಿಷ್ ಬ್ಯಾಂಡ್, ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ಸಂಗೀತ ಗೀತೆ ಹಾಡುವ ಮುಖಾಂತರ ನಾಡಿನ ಕಲೆ ಸಂಸ್ಕೃತಿ, ಬಿಂಬಿಸಿದರು.