ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಮಣಿವಣ್ಣನ್ ಪತ್ರ
ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ಸತ್ತೇಗಾಲ ಗ್ರಾಮದ ಕಾವೇರಿ ನದಿ ತಟದಲ್ಲಿರುವ ಚೋಳರಕಾಲದ ಶ್ರೀ ಕಾಶಿವಿಶ್ವನಾಥ ಹಾಗೂ ವಿಶಾಲಾಕ್ಷಿ ಪುರಾತನ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವಹಿಸಿಕೊಂಡು ನಿರ್ವಹಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಮಣಿವಣ್ಣನ್ ಮುಜರಾಯಿ ಇಲಾಖೆ ಆಯುಕ್ತ ಎಚ್.ಬಸವರಾಜೇಂದ್ರ ಅವರಿಗೆ ಪತ್ರ ಬರೆದಿದ್ದಾರೆ.
ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಆ.5 ರಂದು ತಮ್ಮ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾವೇರಿ ನದಿ ಪ್ರವಾಹ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಆಗಮಿಸಿದ್ದ ಪಿ.ಮಣಿವಣ್ಣನ್, ಮಾರ್ಗ ಮಧ್ಯೆ ಪ್ರವಾಹ ಪೀಡಿತ ಸ್ಥಳ, ಜಮೀನುಗಳಿಗೆ ಅನಿರಿಕ್ಷಿತ ಭೇಟಿ ನೀಡಿದ್ದರಲ್ಲದೇ, ಪಾಳು ಬಿದ್ದಿದ್ದ ಈ ದೇವಸ್ಥಾನವನ್ನೂ ವೀಕ್ಷಣೆ ಮಾಡಿದ್ದರು.
ಬಳಿಕ ಸಭೆಗೆ ಹಾಜರಾಗಿ ವಾಪಸ್ ಬೆಂಗಳೂರಿಗೆ ತೆರಳುವಾಗ ಪಿ.ಮಣಿವಣ್ಣನ್, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್ ಅವರೊಟ್ಟಿಗೆ ಸತ್ತೇಗಾಲದ ಶ್ರೀ ಕಾಶಿವಿಶ್ವನಾಥ ಹಾಗೂ ವಿಶಾಲಾಕ್ಷಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆಯೇ? ಅಥವಾ ಇಲ್ಲವೇ ಎಂಬುದರ ಮಾಹಿತಿ ಕೇಳಿದ್ದರು.
ತಾವು ದೇಗುಲ ವೀಕ್ಷಣೆ ಮಾಡುವಾಗ ದೇವಸ್ಥಾನದ ಮುಂಭಾಗದ ಗೋಡೆಗಳು ಹಾಳಾಗಿರುವುದು, ದೇವಸ್ಥಾನ ಬಹಳ ವರ್ಷಗಳಿಂದಲೂ ಸುಣ್ಣ-ಬಣ್ಣ ಕಾಣದಿರುವುದು. ದೇಗುಲ ಹೊರಗಿನಿಂದ ಸುಂದರವಾಗಿ ಕಾಣುತ್ತಿದೆ. ಆದರೆ, ಈ ದೇವಸ್ಥಾನವು ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಹಾಗಾಗಿ, ಇದರ ಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದ್ದರು. ಮಾತ್ರವಲ್ಲದೇ, ಇದು ಬಹಳ ಪುರಾತನ ದೇವಸ್ಥಾನವಾಗಿರುವುದರಿಂದ ದೇವಾಲಯದ ಜೀರ್ಣೊದ್ದಾರಕ್ಕೆ ಕ್ರಮ ಕೈಗೊಳ್ಳಿ ಎಂದು ಮೌಖಿಕ ಸಲಹೆ ನೀಡಿದ್ದರು.
ದೇಗುಲ ಮುಜರಾಯಿಗೆ ಸೇರಿದ್ದಲ್ಲ: ಚಾ.ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಮಣಿವಣ್ಣನ್ ಅವರ ಸೂಚನೆಯಂತೆ ಜಿಲ್ಲಾಧಿಕಾರಿ ಸಿ.ಟಿ.ಸಿಲ್ಪನಾಗ್, ಸತ್ತೇಗಾಲದ ಶ್ರೀ ಕಾಶಿವಿಶ್ವನಾಥ, ವಿಶಾಲಾಕ್ಷಿ ದೇವಸ್ಥಾನದ ಮಾಹಿತಿಯನ್ನು ಗ್ರಾಮ ಲೆಕ್ಕಿಗರಿಂದ ಪಡೆದುಕೊಂಡರು. ಆ ಪ್ರಕಾರ ಈ ದೇಗುಲ ಮುಜರಾಯಿ ಇಲಾಖೆಗೆ ಒಳಪಡುವುದಿಲ್ಲ ಎಂಬ ಮಾಹಿತಿಯನ್ನು ಪಿ.ಮಣಿವಣ್ಣನ್ ಅವರಿಗೆ ತಿಳಿಸಿದ್ದರು.
ಆಯುಕ್ತರಿಗೆ ಬರೆದ ಪತ್ರದಲ್ಲಿ ಏನಿದೆ: ಸತ್ತೇಗಾಲ ಗ್ರಾಮದಲ್ಲಿರುವ ಶ್ರೀ ಕಾಶಿ ವಿಶ್ವನಾಥ, ವಿಶಾಲಾಕ್ಷಿ ದೇಗುಲದ ಸಂಬಂಧ ಆ.9 ರಂದು ಪಿ.ಮಣಿವಣ್ಣನ್, ಮುಜರಾಯಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಅವರು ಹೀಗೆ ಪ್ರಸ್ತಾಪಿಸಿದ್ದಾರೆ. ಸತ್ತೇಗಾಲದ ಕಾಶಿ ವಿಶ್ವಾನಾಥ, ವಿಶಾಲಾಕ್ಷಿ ದೇವಸ್ಥಾನದ ನಿರ್ವಹಣೆ ಮತ್ತು ಆಡಳಿತವನ್ನು ಸ್ವಾಧೀನಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ನಿಬಂಧನೆಗಳ ಅಡಿಯಲ್ಲಿ ಕರ್ನಾಟಕ ಸರ್ಕಾರವು ವಹಿಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ ಮತ್ತು ಚಾರಿಟಬಲ್ ಎಂಡೋಮೆಂಟ್ ಆಕ್ಟ್ 1997 ಮತ್ತು ನಿಯಮಗಳು, 2002, 2012 ಜ.27ರ ಸರ್ಕಾರಿ ಆದೇಶ ಸಂಖ್ಯೆ ಕುಮ್ ಇ 148/ಮುಸೇವಿ/2011ರ ಮೂಲಕ ತಿದ್ದುಪಡಿ ಮಾಡಲಾಗಿದೆ. ಸತ್ತೇಗಾಲ ಗ್ರಾಮದಲ್ಲಿ 1.72 ಎಕರೆ ವಿಸ್ತೀರ್ಣದ ಸರ್ವೆ ನಂ.1115 ಅನ್ನು ಹೊಂದಿದ್ದು, ದೇವಸ್ಥಾನ ಪರಂಪೋಕ್ ಹೆಸರಿನಲ್ಲಿದೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಹೊರತಾಗಿಯೂ, ದೇವಾಲಯವು ಭೀಕರ ಸ್ಥಿತಿಯಲ್ಲಿದೆ. ನಿರ್ವಹಣೆ ವಿಷಯದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಸಾಕಷ್ಟು ಮೂಲ ಸೌಕರ್ಯ ಮತ್ತು ಸರಿಯಾದ ಆಡಳಿತದ ಮೇಲುಸ್ತುವಾರಿ ಇಲ್ಲದಿರುವುದು ದೇವಾಲಯದ ಶಿಥಿಲತೆಗೆ ಕಾರಣವಾಗಿದೆ. ಸರ್ಕಾರಕ್ಕೆ ಸೇರಿದ ಸುತ್ತಮುತ್ತಲಿನ ಭೂಮಿ ಮತ್ತು ದೇವಾಲಯದ ಆವರಣಗಳು ತಮ್ಮ ಹಿಂದಿನ ವೈಭವವನ್ನು ಮರುಸ್ಥಾಪಿಸಲು ಮತ್ತು ಅಂತಹ ಪ್ರಾಮುಖ್ಯತೆಯ ದೃಷ್ಠಿಯಿಂದ ನಿರೀಕ್ಷಿತ ಮಾನದಂಡಗಳನ್ನು ಪೂರೈಸಲು ತುರ್ತು ಪುನರುಜ್ಜೀವನದ ಪ್ರಯತ್ನಗಳ ಅಗತ್ಯವಿದೆ. ದೇಗುಲವನ್ನು ಮುಜರಾಯಿ ಇಲಾಖೆಗೆ ವಹಿಸಿಕೊಂಡು ಸರ್ಕಾರದ ಮಧ್ಯಸ್ಥಿಕೆಯು ದೇವಾಲಯಕ್ಕೆ ಹೊಸ ಜೀವನವನ್ನು ನೀಡುವುದಲ್ಲದೇ, ಭವಿಷ್ಯದ ಪೀಳಿಗೆಗೆ ಅದರ ಸಂರಕ್ಷಣೆಯನ್ನು ಖಚಿತಪಡಿಸುತ್ತದೆ ಮತ್ತು ಅದನ್ನು ಪ್ರಮುಖ ತಾಣವಾಗಿ ಉನ್ನತೀಕರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಗುಲದ ಸ್ಥಿತಿ ಹೀಗಿದೆ: ಶ್ರೀ ಕಾಶಿವಿಶ್ವನಾಥ, ವಿಶಾಲಾಕ್ಷಿ ದೇವಸ್ಥಾನ ಚೋಳರಕಾಲದಲ್ಲಿ ನಿರ್ಮಾಣವಾಗಿದ್ದು, ದೇವಸ್ಥಾನದಲ್ಲಿ ಕಾಶಿವಿಶ್ವನಾಥ ಮೂರ್ತಿ, ನಂದೀಶ್ವರಮೂರ್ತಿ ಗಣಪತಿ, ವಿಶಾಲಾಕ್ಷಿಮೂರ್ತಿ, ನವಗ್ರಹಗಳಿವೆ. ಆವರಣದಲ್ಲಿ ಬೃಹತ್ ಆಕಾರದ ನಾಗ ಸಂಪಿಗೆ ಮರ ಬೆಳೆದಿದ್ದು, ದೇವಸ್ಥಾನದ ಮುಂಭಾಗದ ಸುಮಾರು 50 ಅಡಿ ಎತ್ತರದ ಗರುಡಗಂಬವಿದೆ. ದೇವಸ್ಥಾನದ ಹಿಂಭಾಗದಲ್ಲಿ ಪಂಚಲಿಂಗಮೂರ್ತಿಗಳಿದ್ದು, ಇವುಗಳಿಗೆ ಅರ್ಚಕ ಚಂದ್ರಶೇಖರ್ ಎಂಬುವರು ಗ್ರಾಮದ ಸಾರ್ವಜನಿಕರಿಂದ ಆರ್ಥಿಕ ಸಹಾಯ ಪಡೆದು ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಮಹಾ ಶಿವರಾತ್ರಿ, ಯುಗಾದಿ ಹಬ್ಬಗಳಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದ್ದಾರೆ. ದೇವಸ್ಥಾನದ ಹೊರಗೆ ಮತ್ತು ಒಳಗೆ ಗೋಡೆಗಳು ಬಿರುಕು ಬಿಟ್ಟಿದ್ದು, ಗೋಪುರದ ಮೇಲೆ ಹಾಗೂ ಸುತ್ತು ಗೋಡೆಗಳ ಮೇಲೆ ಮರ ಗಿಡಗಳು ಬೆಳೆದು ನಿಂತಿದ್ದು, ಗ್ರಾಮದ ಮಂಚೆಗೌಡ ಎಂಬುವರು ತಾವು ಬದುಕಿದ್ದ ಸಂದರ್ಭದಲ್ಲಿ ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ನಡೆಸುವುದರ ಜತೆಗೆ ಅರ್ಚಕರಿಗೆ ಅಲ್ಪಸ್ವಲ್ಪ ಹಣದ ಸಹಾಯ ಮಾಡುತ್ತಿದ್ದರು. ಇದೀಗ ಅದೂ ಕೂಡ ದೇವಸ್ಥಾನದ ನಿರ್ವಹಣೆಗೆ ದೊರೆಯದ ಕಾರಣ ಪೂಜೆ ಪುನಸ್ಕಾರ ಸ್ಥಗಿತಗೊಂಡಿದೆ.
22ಕೆಜಿಎಲ್-2 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ತಾಲೂಕಿನ ಶ್ರೀ ಕಾಶಿವಿಶ್ವನಾಥ, ವಿಶಾಲಾಕ್ಷಿ ದೇವಸ್ಥಾನ ಜೀರ್ಣೊಧ್ಧಾರ ಕಾಣದೆ ಪಾಳು ಬಿದ್ದಿರುವದು.
ಪಿ.ಮಣಿವಣ್ಣನ್ ಮುಜರಾಯಿ ಇಲಾಖೆ ಆಯುಕ್ತರಿಗೆ ಬರೆದಿರುವ ಪತ್ರದ ಪ್ರತಿ