ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಅಧಿನಿಯಮ ಪ್ರಾಧಿಕಾರವನ್ನ ಸಿಎಂ ಸಿದ್ದರಾಮಯ್ಯರ ಸರ್ಕಾರ ರಚನೆ ಮಾಡಿತ್ತು. ಅಭಿವೃದ್ದಿಯ ಹೆಸರಿನಲ್ಲಿ ಹೊಸ ಕಾಯ್ದೆಯನ್ನ ತರುವ ಮೂಲಕ ಚಾಮುಂಡೇಶ್ವರಿ ದೇವಾಲಯದ ಮೇಲೆ ಮೈಸೂರು ರಾಜಮನೆತನದ ಅಧಿಕಾರವನ್ನ ಸಂಪೂರ್ಣವಾಗಿ ಕಸಿದು ಕೊಳ್ಳುವ ಪ್ರಯತ್ನವನ್ನು ಸರ್ಕಾರ ನಡೆಸಿತ್ತು.
ಪ್ರಾಧಿಕಾರ ಅಧಿನಿಯಮದ ಪ್ರಕಾರ ಚಾಮುಂಡೇಶ್ವರಿ ದೇವಾಲಯಕ್ಕೂ ಹಾಗೂ ರಾಜಮನೆತನಕ್ಕೂ ಇರುವ ಸಂಬಂಧ ಕಡಿತಗೊಳಿಸಿ ಎಲ್ಲ ಆಸ್ತಿ, ಪೂಜೆ, ವಿಧಿ ವಿಧಾನ, ಕಾಯ್ದೆ ರಚನೆ ಎಲ್ಲವೂ ಪ್ರಾಧಿಕಾರದ ಪಾಲಾಗಲಿತ್ತು. ಆದರೆ ಇದನ್ನು ಮಹಾರಾಣಿ ಪ್ರಮೋದಾದೇವಿ ಅವರು ಹೈಕೋರ್ಟ್ ಮೂಲಕ ಪ್ರಶ್ನೆ ಮಾಡಿ ರಿಟ್ ಅರ್ಜಿಯನ್ನ ಸಲ್ಲಿಸಿದ್ದರು.
ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದ ರಾಜ್ಯಸರ್ಕಾರಕ್ಕೆ ನ್ಯಾಯಾಲಯದಲ್ಲಿ ತಾತ್ಕಾಲಿಕ ಹಿನ್ನಡೆ ಉಂಟಾಗಿದೆ. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮೈಸೂರಿನ ಅರಮನೆಯ ಪ್ರಮೋದಾ ದೇವಿ ಒಡೆಯರ್ ಅವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ನ ಏಕಸದಸ್ಯ ಪೀಠ ಮುಂದಿನ ಆದೇಶದವರೆಗೂ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಚಟುವಟಿಕೆಗಳಿಗೆ ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ರವರು ತಡೆಯಾಜ್ಞೆ ನೀಡಿದ್ದಾರೆ. ಹಾಗೂ ಮುಂದಿನ ಅರ್ಜಿ ವಿಚಾರಣೆಯನ್ನು ಇದೇ ತಿಂಗಳ 22 ಕ್ಕೆ ಮುಂದೂಡಿದ್ದಾರೆ.
ಅರ್ಜಿದಾರರ ಪರವಾಗಿ ವಕೀಲರಾದ ಮಾನಸಿ ಕುಮಾರ್ ಅವರು ವಾದ ಮಂಡಿಸಿದ್ದರು.ಕಳೆದ ಅಧಿವೇಶನದ ವೇಳೆ ವಿಧಾನಮಂಡಲದ ಉಭಯಸದನಗಳಲ್ಲಿ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆಯನ್ನು ಮಂಡಿಸಿ ಅಂಗೀಕರಿಸಲಾಗಿತ್ತು. ಆದರೆ ಈ ಕಾಯ್ದೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ರಾಜಮನೆತನವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಅರ್ಜಿದಾರರು ದೂರಿದ್ದರು.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024ರ ಹೊಸ ಕಾಯ್ದೆಯ ಮೂಲಕ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ದೇವಸ್ಥಾನ ಕಟ್ಟಿ ತಲೆ ತಲಾಂತರಗಳಿಂದ ಪೂಜಿಸಿಕೊಂಡು ಬಂದ ಒಡೆಯರ ರಾಜಮನೆತನಕ್ಕೆ ಅನ್ಯಾಯ ಮಾಡಲಾಗಿದೆ. ಪ್ರಾಧಿಕಾರದ ಅಧಿನಿಯಮದ ಪ್ರಕಾರ, ಪ್ರಾಧಿಕಾರದ ರಚನೆಯ ಅಧಿಕಾರ ಸರ್ಕಾರಕ್ಕೆ ಸೇರಿದ್ದು, ಅದರ ಅಧ್ಯಕ್ಷ ಸ್ಥಾನ ಸಿಎಂ ಅಂತಾ ಸರ್ಕಾರದ ಕಾಯ್ದೆಯಲ್ಲಿದೆ. ಪ್ರಾಧಿಕಾರದ ಪದಾಧಿಕಾರಿಗಳಲ್ಲಿ ರಾಜಮನೆತನವನ್ನ ಕಡೆಗಣಿಸಿರುವ ಸರ್ಕಾರ ಸ್ಥಳೀಯ ಮಿನಿಸ್ಟರ್, ಶಾಸಕ, ಎಂಪಿ ಮತ್ತು ಅಧಿಕಾರಿಗಳನ್ನ ಮಾತ್ರ ನಮೂದಿಸಿದೆ.
ಅಲ್ಲದೆ ನೌಕರರ ನೇಮಕ ಮಾಡುವ ವಿಚಾರದಲ್ಲಿ ಅರ್ಚಕರು ಸೇರಿ ನೌಕರರ ನೇಮಿಸುವ ಅಧಿಕಾರ ಸರ್ಕಾರದ್ದೇ ಆಗಿದೆ. ಪ್ರಾಧಿಕಾರದ ಸಭೆಯ ತಿರ್ಮಾನಗಳ ಬಗ್ಗೆ ಸರ್ಕಾರಕ್ಕೆ ಅಧಿಕಾರವಿದ್ದು, ಯಾವುದೇ ತೀರ್ಮಾನ ಇದ್ದರೂ ಅದು ಸರ್ಕಾರದ ಮಾತ್ರ ನಿರ್ಣಯ. ಪ್ರಾಧಿಕಾರದ ತಿರ್ಮಾನಗಳ ಜಾರಿ ಮಾಡುವುದು ಕಾರ್ಯದರ್ಶಿಗೆ ಅಧಿಕಾರ ನೀಡಲಾಗಿದೆ. ಹಾಗಾಗಿ ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಇಲ್ಲಿ ಸರ್ಕಾರ ಮೊಟುಕುಗೊಳಿಸಿದೆ.