ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ತಾರಾನಾಥ್ ಅಭಿಪ್ರಾಯ
ಸ.ಗಿರಿಜಾಶಂಕರ್ ಚೊಚ್ಚಲಕೃತಿ ಲೋಕಾರ್ಪಣೆ
ಪ್ರತಿನಿಧಿ ವರದಿ ಚಿಕ್ಕಮಗಳೂರು
ಜ್ಞಾನದ ಬಾಗಿಲು ತೆಗೆದು ಬೆಳಕು ಚೆಲ್ಲುವ ‘ಸಹಸ್ಪಂದನ’ ವೈವಿಧ್ಯಮಯ ಚಿತ್ರಶಾಲೆ ಎಂದು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಾಥ್ ಅಭಿಪ್ರಾಯಿಸಿದರು.
ಸುಗಮಸಂಗೀತ ಗಂಗಾ ಮತ್ತು ವೈಲ್ಡ್ಕ್ಯಾಟ್-ಸಿ ನೇತೃತ್ವದಲ್ಲಿ ಉದ್ಭವ ಪ್ರಕಾಶನ, ಕಲ್ಕಟ್ಟೆಪುಸ್ತಕದಮನೆ, ಮಾಧ್ಯಮಸಂಸ್ಕೃತಿ ಪ್ರತಿಷ್ಠಾನ, ಪೂರ್ವಿ ಸುಗಮಸಂಗೀತ ಅಕಾಡೆಮಿ ಮತ್ತು ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯಪತ್ರಕರ್ತ ಸ.ಗಿರಿಜಾಶಂಕರ್ ಅವರ ಸಮಗ್ರ ಲೇಖನ ಹಾಗೂ ವಿಮರ್ಶೆಗಳ ಸಂಗ್ರಹ ಕೃತಿ ‘ಸಹಸ್ಪಂದನ’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವೈವಿಧ್ಯಮಯ ಬರಹಗಳಿರುವ ಸಂಕಿರಣ ಕೃತಿ ಇದು. ಸ್ವಯಂ ಕಾಳಜಿಯಿಂದ ಬರೆದ 72ಲೇಖನಗಳಿವೆ. ಕೃತಿಕಾರರ ಪರಿಸರ ಆಸೆ, ಕಾಳಜಿ, ಯೋಜನಾಧಾಟಿ ಪ್ರತಿಫಲನವಾಗಿದೆ. ಪತ್ರಿಕೋದ್ಯಮ ಮತ್ತು ಬರವಣಿಗೆ ಗಿರಿಜಾಶಂಕರ್ ಅವರ ಶ್ವಾಸಕೋಶ. ಪ್ರಕೃತಿಪ್ರೇಮ, ಪುಸ್ತಕಪ್ರೀತಿ ನಿಶ್ವಾಸವಾಗಿ ಕೃತಿಯಲ್ಲಿ ಹೆಪ್ಪುಗಟ್ಟಿದೆ ಎಂದು ಬಣ್ಣಿಸಿದರು.
ಸುಗಮಸಂಗೀತ ಗಂಗಾ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ಶಾಸಕ ಎಚ್.ಡಿ.ತಮ್ಮಯ್ಯ, ಕೃತಿಕಾರ ಸ.ಗಿರಿಜಾಶಂಕರ್ ಮಾತನಾಡಿದರು. ಡಾ.ಎಚ್.ಎಸ್.ಸತ್ಯನಾರಾಯಣ, ಡಾ.ಬೆಳವಾಡಿಮಂಜುನಾಥ್, ಎಂ.ಎ.ನಾಗೇಂದ್ರ, ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ, ಅಮೇರಿಕಾದ ಕನ್ನಡತಿ ಸೌಮ್ಯಕೃಷ್ಣ, ವಿಶ್ವಾಸ ಜಿ.ಸರಗೂರ ಇದ್ದರು.