ಆತಂಕದಲ್ಲಿ ಜನರು
ಪ್ರತಿನಿಧಿ ವರದಿ ಚಾಮರಾಜನಗರ
ನಗರದ 18ನೇ ವಾರ್ಡ್ ನ ಉಪ್ಪಾರ ಬೀದಿಯ 1ನೇ ಕ್ರಾಸ್ ನಲ್ಲಿ ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿರುವ ವಿದ್ಯುತ್ ಕಂಬ ವಾಲುವ ಜತೆಗೆ ಕಂಬದಲ್ಲಿರುವ ವಿದ್ಯುತ್ ಸರಬರಾಜು ಮುಖ್ಯ ತಂತಿಗಳು ಜೋತು ಬಿದ್ದು, ಅಪಾಯಕ್ಕೆ ಆಹ್ವಾನ ನೀಡಿದೆ.
ಹಲವು ದಿನಗಳಿಂದಲೂ ವಿದ್ಯುತ್ ಕಂಬ ವಾಲುತ್ತಿದ್ದರೂ ಸಹ ಚೆಸ್ಕಾಂ ಸಿಬ್ಬಂದಿ ಇದನ್ನು ಸರಿಪಡಿಸದೆ ಕಂಡು ಕಾಣದಂತಿದ್ದಾರೆ. ಈ ಕಂಬದಿಂದ ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ವಿದ್ಯುತ್ ಸರಬರಾಜು ಮಾಡುವ ಮುಖ್ಯ ತಂತಿಗಳು ಜೋತು ಬಿದ್ದಿವೆ. ತಂತಿಗಳು ಅದೆಷ್ಟೊ ಬಾರಿ ಒಂದಕ್ಕೊಂದು ತಗುಲಿ ಮನೆಗಳಿಗೆ ವಿದ್ಯುತ್ ಪ್ರವಹಿಸಿ ಮನೆಯಲ್ಲಿದ್ದ ವಿದ್ಯುತ್ ಪರಿಕರಗಳು ಸುಟ್ಟು ಹೋಗಿದ್ದವು.
ವಿದ್ಯುತ್ ಕಂಬವನ್ನು ಬದಲಿಸುವಂತೆ ಹಾಗೂ ಜೋತು ಬಿದ್ದಿರುವ ವಿದ್ಯುತ್ ಸರಬರಾಜು ಮುಖ್ಯ ತಂತಿಗಳನ್ನು ಸರಿಪಡಿಸುವಂತೆ ಹಲವು ಬಾರಿ ಚೆಸ್ಕಾಂ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗಿಲ್ಲ. ವಿದ್ಯುತ್ ಅವಘಡ ಸಂಭವಿಸುವ ಮುನ್ನ ಚೆಸ್ಕಾಂ ಸಿಬ್ಬಂದಿ ಇದನ್ನು ಸರಿಪಡಿಸಲಿ ಎಂದು ವಾರ್ಡ್ ನಿವಾಸಿಗಳು ಆಗ್ರಹಿಸಿದ್ದಾರೆ.
23ಸಿಎಚ್ಎನ್.2: ಚಾಮರಾಜನಗರದ 18ನೇ ವಾರ್ಡ್ ನ ಉಪ್ಪಾರ ಬೀದಿಯಲ್ಲಿ ವಿದ್ಯುತ್ ಕಂಬ ವಾಲುವ ಜತೆಗೆ ಕಂಬದಲ್ಲಿರುವ ವಿದ್ಯುತ್ ಸರಬರಾಜು ಮುಖ್ಯ ತಂತಿಗಳು ಜೋತು ಬಿದ್ದು, ಅಪಾಯಕ್ಕೆ ಆಹ್ವಾನ ನೀಡಿದೆ.