ಪ್ರತಿನಿಧಿ ವರದಿ ಹನೂರು
ಅಸ್ತಮಾ ಚಿಕಿತ್ಸೆಗಾಗಿ ಬಂದು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದ ಪರಿಣಾಮ ಸುಮಾರು 2 ಗಂಟೆಗಳ ಕಾಲ ಆಸ್ಪತ್ರೆಯ ಮುಂಭಾಗವೇ ಕುಳಿತು ಪರದಾಡಿರುವ ಘಟನೆ ಸೋಮವಾರ ತಡರಾತ್ರಿ ಜರುಗಿದೆ.
ಹನೂರು ತಾಲೂಕಿನ ನಾಗನತ್ತ ಗ್ರಾಮದ ವಸಂತ 30 ವರ್ಷ ಅಸ್ತಮಾ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬಂದು ವೈದ್ಯರಿಲ್ಲದೆ ಪರದಾಡಿದ ಮಹಿಳೆಯಾಗಿದ್ದಾರೆ.
ಘಟನೆ ವಿವರ : ವಸಂತ ಎಂಬುವರಿಗೆ ಸೋಮವಾರ ಸಂಜೆ ಇದ್ದಕ್ಕಿದ್ದ ಹಾಗೆ ಅಸ್ತಮಾ ಹೆಚ್ಚಾಗಿದೆ. ಈ ವೇಳೆ ಗ್ರಾಮದಿಂದ ದ್ವಿಚಕ್ರ ವಾಹನದ ಮೂಲಕ ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದಾರೆ. ಈ ವೇಳೆ ಕೇವಲ ನರ್ಸ್ ಇದ್ದುದರಿಂದ ವೈದ್ಯಾಧಿಕಾರಿಗಳು ಇಲ್ಲ ನೀವು ಬೇರೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ದಿಕ್ಕುತೋಚದ ಮಹಿಳೆ ಪಟ್ಟಣದ ಮೂರು ಖಾಸಗಿ ಕ್ಲಿನಿಕ್ ಗಳಿಗೆ ತೆರಳಿದ್ದಾರೆ. ಅಲ್ಲಿಯೂ ವೈದ್ಯರು ಇಲ್ಲದ ಪರಿಣಾಮ ಚಿಕಿತ್ಸೆ ಸಿಗದೆ ಪುನಃ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದಾರೆ. ಆಗಲೂ ವೈದ್ಯಾಧಿಕಾರಿಗಳು ಇಲ್ಲದೆ, ಕಾಮಗೆರೆ ಹೋಲಿ ಕ್ರಾಸ್, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ತೆರಳಲು ವಾಹನದ ವ್ಯವಸ್ಥೆಯು ಇಲ್ಲದೆ ರೋಗಿಯು ಪರದಾಡಿದ್ದಾರೆ.
ಈ ಬಗ್ಗೆ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜು ಮಾತನಾಡಿ ಹನೂರು ತಾಲೂಕು ಕೇಂದ್ರವಾಗಿ 6 ವರ್ಷಗಳು ಕಳೆದಿದೆ . ಇದುವರೆಗೂ ತಾಲೂಕು ಆಸ್ಪತ್ರೆ ನಿರ್ಮಾಣವಾಗಿಲ್ಲ. ಶಾಸಕರಾಗಿರುವ ಮಂಜುನಾಥ್ ರವರು ವೈದ್ಯಾಧಿಕಾರಿಗಳನ್ನು ಹಾಕಿಸುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರದಲ್ಲಿ ಬಡವರೇ ಹೆಚ್ಚಿರುವುದರಿಂದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಶಕ್ತರಾಗಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಸುವಂತೆ ಒತ್ತಾಯಿಸಿದ್ದಾರೆ.