ಮಡಿಕೇರಿ : ಅಪಘಾತ ಪ್ರಕರಣದಲ್ಲಿ ಗಾಯಾಳು ಒಂದುಕಡೆ ಸಾವನ್ನಪ್ಪಿದರೆ, ಅಪಘಾತ ಮಾಡಿದ ವ್ಯಕ್ತಿಯೂ ಮನನೊಂದು ನೇಣಿಗೆ ಕೊರಳೊಡ್ಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿ ನಗರ ಸಮೀಪದ ಚೈನ್ ಗೇಟ್ ಬಳಿ ಕಳೆದ ಶುಕ್ರವಾರ ಸಂಜೆ ಅಪಘಾತವೊಂದು ಸಂಭವಿಸಿತ್ತು. ಸೋಮವಾರಪೇಟೆ ತಾಲ್ಲೂಕಿನ ಕಾಂಡನಕೊಲ್ಲಿ ಗ್ರಾಮದ ನಿವಾಸಿ ಗಗನ್ ಸುಬ್ಬಯ್ಯ (23), ಮಡಿಕೇರಿಯಿಂದ ತನ್ನ ಗ್ರಾಮದತ್ತ ತನ್ನ ಬೈಕ್ ನಲ್ಲಿ ತೆರಳುತ್ತಿದ್ದ. ಅದೇ ಸಂದರ್ಭ ಉಪ ರಸ್ತೆಯಿಂದ ಮಡಿಕೇರಿ ತಾಲ್ಲೂಕಿನ ಹೆರವನಾಡು ಗ್ರಾಮದ ತಮ್ಮಯ್ಯ (57) ಎಂಬುವರು ತಮ್ಮ ಸ್ಕೂಟಿಯಲ್ಲಿ ಹೆದ್ದಾರಿ ಪ್ರವೇಶಿಸುತ್ತಾರೆ. ಕ್ಷಣಮಾತ್ರದಲ್ಲಿ ತಮ್ಮಯ್ಯ ಅವರ ಸ್ಕೂಟಿ ಗಗನ್ ಓಡಿಸುತ್ತಿದ್ದ ಬೈಕ್ಗೆ ಅಪ್ಪಳಿಸಿ ಆ ಬೈಕ್ ಕುಶಾಲನಗರ ಕಡೆಯಿಂದ ಬರುತ್ತಿದ್ದ ಲಾರಿಗೆ ಗುದ್ದಿ ಕೆಳಕ್ಕೆ ಬೀಳುತ್ತದೆ. ತಲೆ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಕಾರಣ ಗಗನ್ ಸಾವನ್ನಪ್ಪಿದ್ದಾನೆ. ಹೀಗಾಗಿ ಮನನೊಂದ ತಮ್ಮಯ್ಯ ಕಾಫಿ ತೋಟದಲ್ಲಿ ನೇಣಿಗೆ ಶರಣಾಗಿದ್ದಾರೆ.