ಮೈಸೂರು: ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಹಳೇ ವೈಷಮ್ಯಕ್ಕೆ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಜರುಗಿದೆ. ಕೃಷಿ ಕೂಲಿ ಕಾರ್ಮಿಕ ಪ್ರಮೋದ್ ಅಲಿಯಾಸ್ ರಾಜು (27) ಚಾಕು ಇರಿತಕ್ಕೊಳಗಾದ ಯುವಕನಾಗಿದ್ದು, ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿರಿಕ್ಯಾತನಹಳ್ಳಿ ಗ್ರಾಮದವನೇ ಆದ ಕುರಿ ವ್ಯಾಪಾರಿ ಕುಮಾರನಾಯ್ಕ ಎಂಬುವನು ರಾಜುವಿಗೆ ಚಾಕುವಿನಿಂದ ಇರಿತ ಮಾಡಿದ್ದು, ಹಣಕಾಸು ವಿಚಾರದಲ್ಲಿ ಪ್ರಮೋದ್ ಮತ್ತು ಕುಮಾರನಾಯ್ಕ ನಡುವೆ ಈ ಮೊದಲು ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದೇ ಹಳೇ ವೈಷಮ್ಯದಿಂದ ನಿನ್ನೆ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪ್ರಮೋದ್ ಮೇಲೆ ಕುಮಾರನಾಯ್ಕ ದಾಳಿ ನಡೆಸಿ, ಪ್ರಮೋದ್ನ ಎಡಗೈ ಭಾಗಕ್ಕೆ ಚಾಕುವಿನಿಂದ ತಿವಿದಿದ್ದಾನೆ.
ಈ ವೇಳೆ ಸ್ಥಳೀಯರು ಪ್ರಮೋದ್ನನ್ನು ಕುಮಾರನಾಯ್ಕನಿಂದ ರಕ್ಷಿಸಿದ್ದಾರೆ ಅಲ್ಲದೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಕುಮಾರನಾಯ್ಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.