ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆತಿದೆ. ದಸರಾ ಮೆರವಣಿಗೆಯ ಕೇಂದ್ರಬಿಂದುವಾದ ಗಜ ಪಡೆ ಇಂದು ಕಾಡಿನಿಂದ ಮೈಸೂರಿನತ್ತ ಪಯಣ ಬೆಳೆಸಿದೆ. ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಇಂದು ಅರಮನೆ ನಗರಿಗೆ ಎಂಟ್ರಿ ಕೊಟ್ಟಿದೆ. ಕಾಡಿನಿಂದ ನಾಡಿನತ್ತ ಹೊರಡುವ ಕ್ಯಾಪ್ಟನ್ ಅಭಿಮನ್ಯು & ಟೀಂ ಇಂದು ದಸರಾ ಶುಭಕಾರ್ಯಗಳಿಗೆ ವಿದ್ಯುಕ್ತ ಮುನ್ನುಡಿ ಬರೆದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಇಂದು ಚಾಲನೆ ದೊರೆತಿದೆ.
ನಾಗರಹೊಳೆ ಅಭಯಾರಣ್ಯದ ಅಂಚಿನಲ್ಲಿರುವ ವೀರನಹೊಸಹಳ್ಳಿಯಲ್ಲಿ ಬೆಳಿಗ್ಗೆ 10:20 ರಿಂದ 10:45ರೊಳಗಿನ ಶುಭ ತುಲಾ ಲಗ್ನದಲ್ಲಿ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಗಣ್ಯರು ವಿದ್ಯುಕ್ತ ಚಾಲನೆ ನೀಡಿದ್ದಾರೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಚಿವರಾದ ಕೆ ವೆಂಕಟೇಶ್, ಈಶ್ವರ ಖಂಡ್ರೆ, ಸಂಸದ ಸುನಿಲ್ ಬೋಸ್, ಶಾಸಕರಾದ ಜಿ ಡಿ ಹರೀಶ್ ಗೌಡ, ಡಿ ರವಿಶಂಕರ್, ಅನಿಲ್ ಚಿಕ್ಕಮಾದು, ಎಂಎಲ್ಸಿ ವಿವೇಕಾನಂದ, ಮುಡಾ ಅಧ್ಯಕ್ಷ ಕೆ ಮರೀಗೌಡ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯರು ದಸರಾ ಗಜಪಡೆಗೆ ಪುಷ್ಪಾರ್ಚನೆ ಮಾಡಿದ್ದಾರೆ. ನಂತರ ಗಜಪಡೆಗೆ ಆರತಿ ಬೆಳಗಿ ಗಜಪಯಣಕ್ಕೆ ಚಾಲನೆ ನೀಡಿದ್ದಾರೆ.
ಅಭಿಮನ್ಯು & ಟೀಂನ ಮೊದಲ ಹಂತದ ಲಿಸ್ಟ್ ಇಲ್ಲಿದೆ ನೋಡಿ
ಕ್ಯಾಪ್ಟನ್ ಅಭಿಮನ್ಯು (58),
ಭೀಮ (24),
ಗೋಪಿ (41)
ಧನಂಜಯ (43),
ಕಂಜನ್ (25),
ರೋಹಿತ್ (22),
ಲಕ್ಷ್ಮಿ (53),
ವರಲಕ್ಷ್ಮಿ (67),
ಏಕಲವ್ಯ (38)
ಒಟ್ಟಾರೆ ೯ ಆನೆಗಳು ಮೊದಲ ಹಂತದಲ್ಲಿ ಇಂದು ಮೈಸೂರಿಗೆ ಆಗಮಿಸುತ್ತಿದ್ದರೆ, ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ. ಹಾಗೂ ಹೆಚ್ಚುವರಿಯಾಗಿ 4 ಮೀಸಲು ಆನೆಗಳು ಗುರುತಿಸಲಾಗಿದೆ. ದಸರಾದಲ್ಲಿ ಪಾಲ್ಗೊಳ್ಳಲು ಒಟ್ಟು ಹದಿನಾಲ್ಕು ಆನೆಗಳು ಮಾತ್ರ ಮೈಸೂರಿಗೆ ಆಗಮಿಸಲಿದ್ದು, ಅಗತ್ಯ ಬಿದ್ದರೆ ಮಾತ್ರ ಮೀಸಲು ಆನೆಗಳನ್ನು ಕರೆತರಲು ತೀರ್ಮಾನಿಸಲಾಗಿದೆ. ಇಂದು ಮತ್ತು ನಾಳೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ವಾಸ್ತವ್ಯ ಹೂಡಲಿರುವ ಅಭಿಮನ್ಯು ಅಂಡ್ ಟೀಮ್, ಬರುವ ಶುಕ್ರವಾರ ಅರಮನೆ ಆವರಣ ಪ್ರವೇಶಿಸಲಿದೆ. ಈ ಸಂದರ್ಭ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅರಮನೆಗೆ ಗಜಪಡೆ ಬರಮಾಡಿಕೊಳ್ಳಲಿದೆ. ಆ.24ರಂದು ದಸರಾ ಗಜಪಡೆಯ ಆನೆಗಳಿಗೆ ತೂಕ ಪರೀಕ್ಷೆ ನಡೆಯಲಿದೆ. ಈಗಾಗಲೇ ಆನೆಗಳು, ಮಾವುತರು ಹಾಗು ಕಾವಾಡಿಗಳ ವಾಸ್ತವ್ಯಕ್ಕಾಗಿ ಮೈಸೂರು ಅರಮನೆ ಆವರಣದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ.