ಪ್ರತಿನಿಧಿ ವರದಿ ಚಾಮರಾಜನಗರ
ಭಾರತ ಸೇರಿದಂತೆ ವಿಶ್ವದಾದ್ಯಂತ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಅಶಾಂತಿಯ ಬಿರುಗಾಳಿ ಎದ್ದಿದೆ. ಇಂತಹ ವಿಚ್ಚಿದ್ರಕಾರಕ ಪರಿಸ್ಥಿತಿಯಲ್ಲಿ ರಂಗಭೂಮಿ ಮೂಲಕ ಸಮಾಧಾನಕರ ಪರಿಸ್ಥಿತಿಯನ್ನು ಕಂಡುಕೊಳ್ಳಬೇಕಿದೆ ಎಂದು ಹಿರಿಯ ಪತ್ರಕರ್ತ ಅಬ್ರಹಾಂ ಡಿ.ಸಿಲ್ವ ಹೇಳಿದರು.
ರಂಗತರಂಗ ಟ್ರಸ್ಟ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ರಂಗ ಸಾಧಕರಿಗೆ ಸನ್ಮಾನ ಸಮಾರಂಭವನ್ನು ತಮಟೆ ಬಾರಿಸಿ ಉದ್ಘಾಟಿಸಿ ಮಾತನಾಡಿದರು.
ಧರ್ಮ ಎಂಬುದು ಹಿಂಸೆಯಲ್ಲ, ಭಯವಲ್ಲ. ಜಗತ್ತಿನಲ್ಲಿ ನಡೆಯುತ್ತಿರುವ ಯುದ್ದ, ಹಿಂಸೆ, ಕೌರ್ಯಗಳಿಗೆ ಬುದ್ದ ಕರುಣೆಯ ಹಾದಿ ತೋರಿದರು. ಬಸವಣ್ಣ ದಯೆಯೇ ಧರ್ಮದ ಮೂಲ ಎಂದಿದ್ದರು. ರಂಗಭೂಮಿಯನ್ನು ಸಾಧನವಾಗಿ ಬಳಸಿ ಹಿಂಸೆ, ಕೌರ್ಯ ಸೋಲಿಸಬೇಕಿದೆ ಎಂದರು.
ಮುಖ್ಯ ಭಾಷಣ ಮಾಡಿದ ಚಾ.ನಗರ ವಿವಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಬಸವಣ್ಣ ಮೂಕಳ್ಳಿ, ಜಿಲ್ಲೆಯಲ್ಲಿ ಹತ್ತಾರು ರಂಗತಂಡಗಳಿದ್ದು, ಬೆರಳೆಣಿಕೆ ತಂಡಗಳು ಸಕ್ರಿಯವಾಗಿವೆ. ಇಲ್ಲಿಯ ರಂಗಭೂಮಿ ಸಶಕ್ತವಾಗಿದೆ. ರಂಗಭೂಮಿಯ ಮೂಲಕ ಚಲನಚಿತ್ರ ರಂಗ ಪ್ರವೇಶಿಸಿದವರು ಭದ್ರನೆಲೆ ಕಂಡುಕೊಂಡಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಂಗತರಂಗ ಟ್ರಸ್ಟ್ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ, ನಮ್ಮ ಸಂಸ್ಥೆ ಬೆಳ್ಳಿಹಬ್ಬ ಮುಗಿಸಿ 30ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಹತ್ತಾರು ರಂಗ ನಾಟಕ ಪ್ರದರ್ಶನ ಮಾಡಿದೆ. ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಯಶಸ್ವಿಯಾಗಿ ನಡೆಸಿ ಜಿಲ್ಲೆಯ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವ ರಾಯಭಾರಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಪೌರಾಣಿಕ ನಾಟಕ ಕಲಾವಿದ ಜಯರಾಜು ಅವರನ್ನು ಸನ್ಮಾನಿಸಲಾಯಿತು. ನಾಟಕ ಮಾಸ್ಟರ್ ಶಿವಣ್ಣ, ಹಿರಿಯ ಕಲಾವಿದ ಅಂಬಳೆ ಸಿದ್ದರಾಜು, ಮಹಾಲಿಂಗ ಗಿರ್ಗಿ, ಕಿರಣ್ ಗಿರ್ಗಿ, ಶಿವಶಂಕರ್ಚಟ್ಟು, ಜನಶಕ್ತಿ ಸುರೇಶ್, ಡಿ.ಸಿ.ಸುರೇಂದ್ರ, ಯಡಿಯೂರು ಮಹದೇವ, ಶಿವಕುಮಾರ್ ಜನ್ನೂರುಹೊಸೂರು ಸೇರಿದಂತೆ ಇತರರು ಇದ್ದರು.
30ಸಿಎಚ್ಎನ್.4: ರಂಗತರಂಗ ಟ್ರಸ್ಟ್ ವತಿಯಿಂದ ಚಾಮರಾಜನಗರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗ ಸಾಧಕರನ್ನು ಸನ್ಮಾನಿಸಲಾಯಿತು.