ಚಿಕ್ಕಬಳ್ಳಾಪುರ : ೪೦೦ ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳುತ್ತಿದೆಯಾದರೆ ಆರ್ಎಸ್ಎಸ್ನ ಪ್ರಕಾರವೇ ೨೦೦ ಸ್ಥಾನಗಳನ್ನು ಗೆಲ್ಲುವುದು ಕಷ್ಟವಿದೆ. ೪೦೦ ಸ್ಥಾನ ಗೆಲ್ಲುತ್ತೇವೆ ಎನ್ನುವುದೂ ಚುನಾವಣಾ ತಂತ್ರದ ಭಾಗವಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಎಲ್.ಹನುಮಂತಯ್ಯ ನುಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಬಾಂಡ್ ಮೂಲಕ ಬಿಜೆಪಿಯು ಭ್ರಷ್ಟಾಚಾರವನ್ನು ಕಾನೂನು ಬದ್ಧಗೊಳಿಸಲು ಮುಂದಾಗಿದೆ. ಕರ್ನಾಟಕವಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳಲ್ಲಿಯೂ ಎದುರಾಳಿ ಪಕ್ಷಗಳ ನಾಯಕರನ್ನು ಐಟಿ, ಇಡಿ ತನಿಖೆ ಹೆಸರಿನಲ್ಲಿ ಬ್ಲಾಕ್ಮೇಲ್ ಮಾಡಲಾಗುತ್ತಿದೆ. ಈ ಹಿಂದೆ ತತ್ವ, ಸಿದ್ಧಾಂತದ ಪಕ್ಷ ಬಿಜೆಪಿ ಎನ್ನುತ್ತಿದ್ದರು. ಆದರೆ ಈಗ ಬೆದರಿಸುವುದೇ ತಂತ್ರವಾಗಿದೆ ಎಂದು ದೂರಿದರು.
ದೇಶದಲ್ಲಿ ಬಡತನ ಮಿತಿ ಮೀರಿದೆ, ಮಕ್ಕಳು ಅಪೌಷ್ಟಿಕತೆಯಿಂದ ಬಳುತ್ತಿದ್ದಾರೆ. ಆದರೆ ಈ ಅಂಕಿ ಅಂಶ ತಪ್ಪು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದು ನಾಗರಿಕ ಸರ್ಕಾರದ ಲಕ್ಷಣವಲ್ಲ. ಬಿಜೆಪಿ ಕಳೆದ ೨೦ ವರ್ಷದಿಂದ ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಆದರೆ ಎಂದಿಗೂ ರಾಜ್ಯದ ಜನರು ಬಹುಮತ ನೀಡಿಲ್ಲ. ಶಾಸಕರಿಗೆ ಆಮಿಷವೊಡ್ಡಿ, ರಾಜೀನಾಮೆ ಕೊಡಿಸಿ ಸರ್ಕಾರ ಮಾಡಿದ್ದಾರೆ. ರಾಜ್ಯದ ಜನರು ಬಿಜೆಪಿಯನ್ನು ಮಾನ್ಯ ಮಾಡಿಲ್ಲ. ಜನಾಭಿಪ್ರಾಯ ಇಲ್ಲದೇ ಇದ್ದರೂ ವಾಮಮಾರ್ಗದ ಮೂಲಕ ಸರ್ಕಾರ ರಚಿಸಿದ್ದಾರೆ ಎಂದು ದೂರಿದರು.
ಜಿಎಸ್ಟಿ ತರಬೇಕು ಎಂದುಕೊಂಡಿದ್ದು ಕಾಂಗ್ರೆಸ್. ಆದರೆ ಆ ಸಮಯದಲ್ಲಿ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಜಿಎಸ್ಟಿ ವಿರೋಧಿಸಿದ್ದವು. ಆದರೆ ನಂತರ ಜಿಎಸ್ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಅವೈಜ್ಞಾನಿಕವಾಗಿ ತೆರಿಗೆ ವಿಧಿಸಲಾಗುತ್ತಿದೆ. ಇಡ್ಲಿ, ಕಾಫಿ ಮೇಲೂ ತೆರಿಗೆ. ಇದನ್ನು ಪರಾಮರ್ಶಿಸಬೇಕು ಎನ್ನುವುದು ನಮ್ಮ ಒತ್ತಾಯ ಎಂದರು.
ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿಯು ಶ್ರೀಮಂತರಿಗೆ ಮಾತ್ರ ಎನ್ನುವ ಸ್ಥಿತಿ ಇದೆ. ನವದೆಹಲಿಯಲ್ಲಿ ರೈತರು ಹಕ್ಕುಗಳಿಗಾಗಿ ಒಂದು ವರ್ಷ ಹೋರಾಟ ಮಾಡಿದರೂ ಸಮಸ್ಯೆ ಪರಿಹಾರಕ್ಕೆ ಗಮನ ನೀಡಲಿಲ್ಲ ಎಂದರು.
ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಮುಖಂಡರಾದ ನಂದಿ ಆಂಜನಪ್ಪ, ಲಾಯರ್ ನಾರಾಯಣಸ್ವಾಮಿ ಯಲುವಳ್ಳಿ ಎನ್.ರಮೇಶ್, ಮರಸನಹಳ್ಳಿ ಪ್ರಕಾಶ್, ಕಳವಾರ ಶ್ರೀಧರ್, ಎಂ.ವಿ.ಕೃಷ್ಣಪ್ಪ ಇದ್ದರು.
Leave a comment