– ಕರುಣಾಮಯಿ ಫೌಂಡೇಷನ್ನ ಕಟ್ಟಡ ಉದ್ಘಾಟನೆ
ಪ್ರತಿನಿಧಿ ವರದಿ ಮೈಸೂರು
ಒಳ್ಳೆಯ ಸೌಲಭ್ಯ ಹಾಗೂ ಸೂಕ್ತ ವಿದ್ಯಾಭ್ಯಾಸವನ್ನು ನೀಡಿದರೆ ವಿಶೇಷ ಅಗತ್ಯತೆ ಇರುವವರು ಸಹ ಸಮಾಜದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರಿನ ಆರ್.ಟಿ. ನಗರದಲ್ಲಿರುವ ಕರುಣಾಮಯಿ ಫೌಂಡೇಷನ್ ವಿಶೇಷ ಮಕ್ಕಳ ಶಾಲೆಯ ನೂತನವಾಗಿ ನಿರ್ಮಿಸಲಾದ ʻಆವಿಷ್ಕಾರʼ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಯಾವುದೇ ಮಗು ಅಥವಾ ವ್ಯಕ್ತಿಯೂ ಅಂಗವೈಕಲ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರು ಸಮಾಜದಲ್ಲಿ ಸಾಧನೆ ಮಾಡಲು ಅಥವಾ ಸಮಾಜಮುಖಿ ಕೆಲಸಗಳನ್ನು ಮಾಡುವುದು ಕಷ್ಟವೆಂಬ ತಪ್ಪು ಕಲ್ಪನೆ ಇದೆ. ಆದರೆ ಒಳ್ಳೆಯ ಸೌಲಭ್ಯ, ಸೂಕ್ತ ವಿದ್ಯಾಭ್ಯಾಸವನ್ನು ನೀಡಿದ್ದೇ ಆದಲ್ಲಿ ವಿಶೇಷಚೇತನರಿಗೂ ನಮ್ಮಷ್ಟೇ ಅವಕಾಶಗಳು ಸಿಗಲಿದ್ದು, ಅವರುಗಳು ಸಮಾಜಕ್ಕೆ ಕೊಡುಗೆ ನೀಡಲು ಸಹಕಾರಿಯಾಗಲಿದೆ ಎಂದರು.
ಸಮಾಜಸೇವೆ ಎಂದರೆ ಎಲ್ಲ ವರ್ಗಕ್ಕೂ ಸೇರಬೇಕಿದ್ದು, ಈ ನಿಟ್ಟಿನಲ್ಲಿ ರೋಟರಿ, ರೋಟರಿ ಮಿಡ್ ಟೌನ್ ಸಂಸ್ಥೆ ಸಹ ಉತ್ತಮವಾದ ಕೆಲಸ ಮಾಡುತ್ತಾ ಬಂದಿದೆ. ಮೈಸೂರು ಅರಸರ ಕಾಲದಲ್ಲಿ ಆರಂಭವಾಗಿರುವ ರೋಟರಿ ಸಂಸ್ಥೆ ತನ್ನದೇ ಇತಿಹಾಸ ಹೊಂದಿದೆ. ದಶಕಗಳಿಂದ ಕೆಲಸ ಮಾಡುತ್ತಾ ಬಂದಿದೆ. ಇಂತಹ ಒಳ್ಳೆಯ ಕೆಲಸಕ್ಕೆ ನಾನು ಸದಾ ಸಿದ್ಧನಿದ್ದು, ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಈ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾಲಾಜಿ ಶ್ರೀನಿವಾಸ್, ಕರುಣಾಮಯಿ ಫೌಂಡೇಷನ್ನ ಅಧ್ಯಕ್ಷ ಜಿ.ಸಿ. ಚಿರಣ್ ಕುಮಾರ್, ಕಾರ್ಯದರ್ಶಿ ಕೆ.ವಿ. ಸೌಮ್ಯ ಇನ್ನಿತರರು ಇದ್ದರು.
===================