ಪ್ರತಿನಿಧಿ ವರದಿ ಮಂಡ್ಯ
ಪ್ರಸ್ತುತ ದಿನಗಳಲ್ಲೂ ಯುವಕರಲ್ಲಿ ಎಚ್.ಐ.ವಿ.ಸೋಂಕು ಕಂಡುಬರುತ್ತಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಪ್ರತಿಬಂಧಕ ಘಟಕದ ಜಿಲ್ಲಾ ಮೇಲ್ವಿಚಾರಕ ಆರ್.ಶ್ರೀವಿನಾಯಕ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿರುವ ಮಹಿಳಾ ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜು(ಸ್ವಯತ್ತ), ರೆಡ್ರಿಬ್ಬನ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಹಾಗೂ ಐಕ್ಯೂಎಸಿ ಮಹಿಳಾ ಸರ್ಕಾರಿ ಕಾಲೇಜು, ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಏಡ್ಸ್ ನಿಯಂತ್ರಣ ಪ್ರತಿಬಂಧಕ ಘಟಕ ಇವರ ಸಹಯೋಗದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ವರ್ಷ ವರ್ಷವು ಜಾಗೃತಿ ಮೂಡಿಸುತ್ತಿರುವುದರಿಂದ ಎಚ್.ಐ.ವಿ ಮತ್ತು ಏಡ್ಸ್ ಪ್ರಕರಣಗಳು ತುಂಬ ಕಡಿಮೆಯಾಗುತ್ತಿವೆ, ಆರೋಗ್ಯದ ಅರಿವು, ಭವಿಷ್ಯದ ಜ್ಞಾನ ಎಲ್ಲರಲ್ಲೂ ಇದ್ದರೆ ಅಪಾಯಕಾರಿ ಸೋಂಕುಗಳಿಂದ ದೂರವಿರಬಹದು ಎಂದು ಸಲಹೆ ನೀಡಿದರು.
ಮಂಡ್ಯ ಜಿಲ್ಲೆಯಲ್ಲಿ ೨೦೨೩ರ ಪ್ರಕಾರ ೪೧೭ಮಂದಿ ಸೊಂಕಿಗೆ ಒಳಗಾಗಿದ್ದಾರೆ, ಗರ್ಭಿಣಿಯರಲ್ಲಿ ೧೫ಮಂದಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು, ಸೂಕ್ತ ಚಿಕತ್ಸೆಯಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ವಿಶ್ವ ಏಡ್ಸ್ ದಿನವನ್ನು ಪ್ರತಿ ವರ್ಷ ಡಿ.೧ ರಂದು ಆಚರಿಸಲಾಗುತ್ತಿದೆ, ೨೦೩೦ರ ವೇಳೆಗೆ ಏಡ್ಸ್ ಅನ್ನು ಕೊನೆಗೊಳಿಸುವ ಗುರಿಯನ್ನು ಸಾಧಿಸಲು ಉಳಿದಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಹಂತಗಳಲ್ಲಿ ನಾವು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.
ಬಳಿಕ ಮಿಮ್ಸ್ನ ಎಸ್.ಟಿ.ಡಿ ಸಮಾಲೋಚಕಿ ದೀಪು ಮಾತನಾಡಿ, ಆರೋಗ್ಯದ ಅರಿವು ಎಲ್ಲಾ ರೋಗಗಳಿಂದ ದೂರವಿರುವಂತೆ ಮಾಡುತ್ತದೆ, ಯುವ ಸಮುದಾಯವು ಆರೋಗ್ಯದ ಕಡೆ ಹೆಚ್ಚು ಮಹತ್ವ ನೀಡಬೇಕು, ಉದಾಶೀನ ಮಾಡದೆ ಅನಾರೋಗ್ಯದ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯರನ್ನು ಭೇಟಿ ಮಾಡಿ, ಮುಜುಗರವಾದರೆ ಆರೋಗ್ಯ ಆಪ್ತ ಸಮಾಲೋಚಕಿಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಸಲಹೆ ನೀಡಿದರು.
ಇತಿಹಾಸ ಪ್ರಾಧ್ಯಾಪಕ ಡಾ.ಕೃಷ್ಣೇಗೌಡ, ಹಿರಿಯ ಆರೋಗ್ಯ ಅಧೀಕ್ಷಕ ರಮೇಶ್, ಮಿಮ್ಸ್ನ ಎಸ್.ಟಿಡಿ ಸಮಾಲೋಚಕಿ ದೀಪು, ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ.ಎಂ.ಕೆಂಪಮ್ಮ, ಪ್ರಾಧ್ಯಾಪಕಿ ಡಾ.ಪ್ರಮೀಳಾ, ಡಾ.ಟಿ.ಲತಾ, ಬಿ.ಬಿ.ಪಿ.ರಮೇಶ್ ಮತ್ತಿತರರಿದ್ದರು.