ಸಿಎಂ ಭೇಟಿ ಇಂದು । ಮನೆ ಹಾನಿಗೆ ಪರಿಹಾರ ಹೆಚ್ಚಿಸಿ । ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯ
ಸಣ್ಣುವಂಡ ಕಿಶೋರ್ ನಾಚಪ್ಪ ಮಡಿಕೇರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಆ.2ರಂದು ಜಿಲ್ಲೆಯ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಮಳೆಯಿಂದ ನಷ್ಟವಾಗಿರುವ ಬೆಳೆ ಹಾಗೂ ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡುವಂತೆ ಕೂಗು ಕೇಳಿ ಬಂದಿದೆ.
ರಸ್ತೆ, ಸಾರ್ವಜನಿಕ ಆಸ್ತಿ, ವಿದ್ಯುತ್ ಸಂಪರ್ಕ, ಮನೆ, ಕಟ್ಟಡಗಳ ಹಾನಿಯಾಗಿ ಅಪಾರ ನಷ್ಟವಾಗಿದ್ದು, ಇವು ಮುಖ್ಯಮಂತ್ರಿ ಮುಂದಿರುವ ಪ್ರಮುಖ ಸಮಸ್ಯೆಗಳಾಗಿವೆ. ಆದರೆ ಕಾಂಗ್ರೆಸ್ ಪರಿಹಾರ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ಆಪಾದನೆ ಮಾಡಿದ್ದು, ಕಳೆದ ವರ್ಷದ ಬರ ಪರಿಹಾರ ಕೂಡ ಜನರಿಗೆ ತಲುಪಿಲ್ಲ ಎನ್ನಲಾಗಿದೆ. ಮುಂಗಾರು ಎರಡು ತಿಂಗಳ ಅವಧಿಯಲ್ಲಿ ಭಾರಿ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಬೆಳೆಗಳು ರೈತನ ಕೈಸೇರುವುದೇ ಎಂಬ ಆತಂಕ ಎದುರಾಗಿದೆ.
ಕಾಫಿ, ಅಡಕೆ ಬೆಳೆಗಳು ಸಂಪೂರ್ಣವಾಗಿ ಕೊಳೆತುಹೋಗುವ ಮುನ್ಸೂಚನೆ ತೋರಿವೆ. ಕರಿಮೆಣಸು ಈಗಷ್ಟೇ ಹೂ ಬಿಟ್ಟು ಕಾಯಿ ಕಟ್ಟುತ್ತಿದ್ದು, ಕೊಳೆಯುವ ಸಾಧ್ಯತೆ ಹೆಚ್ಚಿದೆ. ಭತ್ತ ಕೃಷಿಯಲ್ಲಿ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಕಾಫಿ ಬೆಳೆಯಲ್ಲಿ ಮೂರು ರೀತಿಯ ಕೊಳೆ ರೋಗಗಳು ಪತ್ತೆಯಾಗಿವೆ. ಗೊಂಚಲು ಕೊಳೆತು ಮುರಿದು ಬೀಳುವುದು, ಹಸಿ ಕಾಫಿ ಉದುರುವುದು, ತೊಟ್ಟುಗಳಿಂದ ಕೊಳೆತು ಉದುರುವ ರೋಗ ಹೆಚ್ಚಾಗುತ್ತಿದೆ. ಅಡಕೆ ಬೆಳೆ ಸಂಪೂರ್ಣವಾಗಿ ಕೊಳೆ ರೋಗಕ್ಕೆ ತುತ್ತಾಗುತ್ತಿದೆ. ಅಡಕೆ ಕೊಳೆತು ಬೀಳುವುದು, ಮರದ ಬುಡದಲ್ಲಿ ಕಾಯಿಗಳು ಕೊಳೆತು ಕಾಣುವಂತಾಗಿದೆ. ಭತ್ತ ಕೃಷಿಯಲ್ಲಿ ಗದ್ದೆಗಳ ತೆವರಿಗಳು ಹೆಚ್ಚು ಕುಸಿದು ಹೋಗಿದೆ. ಬಿತ್ತನೆ ಮಾಡಿರುವ ಭತ್ತ ಪ್ರವಾಹದಲ್ಲಿ ಕೊಳೆತು ಹೋಗಿವೆ. ಮರು ಬಿತ್ತನೆಗೆ ಬಿತ್ತನೆ ಬೀಜ ಕೂಡ ಕಾಯ್ದಿರಿಸಿಕೊಳ್ಳಲಾಗದೆ ರೈತ ಪಾಡು ಹೇಳದಂತಾಗಿದೆ. ಮರು ಬಿತ್ತನೆ ಆರಂಭವಾಗಿದ್ದು, ಮತ್ತಷ್ಟು ಗದ್ದೆಗಳು ಪಾಳು ಬಿಡುವ ಹಂತದಲ್ಲಿವೆ. ಕಾಫಿ ತೋಟದಲ್ಲಿ ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಸರಳ ನಿಯಮ ರೂಪಿಸಬೇಕೆಂಬ ಒತ್ತಾಯವಿದೆ. ಮರ ಮಳೆಯಲ್ಲಿ ನಾಶವಾಗುವುದನ್ನು ತಡೆಯಲು ಸರಳ ನಿಯಮ ರೂಪಿಸಿ ತಕ್ಷಣ ತೆರವುಗೊಳಿಸಲು ವಿಶೇಷವಾಗಿ ಸರಳ ನಿಯಮ ರೂಪಿಸಬೇಕು ಎಂಬ ಒತ್ತಾಯ ಕೂಡ ಇದೆ.
ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಉಪ ಕೇಂದ್ರಗಳ ಸಂಖ್ಯೆ ಹೆಚ್ಚಿಸುವುದು, ಸಿಬ್ಬಂದಿ ನೇಮಕದಲ್ಲಿ ಶೇ. 100 ಸಾಧನೆ ಮಾಡಬೇಕಿದೆ. ತುರ್ತು ಸಂದರ್ಭದಲ್ಲಿ ವಿದ್ಯುತ್ ದುರಸ್ತಿಗೆ ನೇಮಿಸುವ ಸಿಬ್ಬಂದಿಗೆ ಕೊಡಗಿನ ಹವಾಗುಣ ತಕ್ಷಣ ಒಗ್ಗುವುದಿಲ್ಲ. ಇದರಿಂದಾಗಿ ಹುದ್ದೆ ಸಂಪೂರ್ಣಗೊಳಿಸಲು ಯೋಜನೆ ರೂಪಿಸಬೇಕು ಎಂದ ಒತ್ತಾಯವಿದೆ.
ಕುಸಿದ ಮನೆಗೆ ಪರಿಹಾರ ಹೆಚ್ಚಾಗಬೇಕು: ಮಳೆಯಿಂದ 1 ಅಥವಾ 2 ಕೋಣೆ ಕುಸಿದಾಗ ಪರಿಹಾರ ನೀಡುವಲ್ಲಿ ಅನವಶ್ಯಕ ಲೆಕ್ಕಾಚಾರ ಸಲ್ಲ ಎಂಬ ಒತ್ತಾಯ ಕೂಡ ಇದೆ. 1ರಿಂದ 2 ಕೋಣೆ ಕುಸಿದಾಗ ತೆರವು ಕಾರ್ಯ, ಮತ್ತೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಪರಿಕರಗಳು, ಸಾಗಣೆ ವೆಚ್ಚ, ಕೂಲಿ ಸೇರಿಸಿ ಸಾಕಷ್ಟು ನಷ್ಟ ಎದುರಾಗುತ್ತದೆ. ಜಿಲ್ಲಾಡಳಿತ 1.5 ಲಕ್ಷ ರೂ., 5 ಲಕ್ಷ ರೂ. ಹೀಗೆ ಪರಿಹಾರ ವಿತರಣೆಗೆ ಅನುದಾನ ನೀಡುತ್ತದೆ. ಇದು 2 ಕೋಣೆಯ ಮನೆ ನಿರ್ಮಾಣಕ್ಕೆ ಆರ್ಥಿಕ ಹಿನ್ನಡೆಯಾಗಲಿದೆ. ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಸಾಗಣೆ ವೆಚ್ಚ ದುಬಾರಿಯಾಗಿದೆ. ಕಾರ್ಮಿಕರ ಕೂಲಿ ಕೂಡ ಹೆಚ್ಚು. ಇದನ್ನು ಅರಿತು 5 ಲಕ್ಷ ರೂ. ಅನುದಾನವನ್ನು 7 ಲಕ್ಷ ರೂ.ಗೆ ಏರಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಮುಖ್ಯಮಂತ್ರಿ ಜಿಲ್ಲಾ ಪ್ರವಾಸ: ಮುಖ್ಯಮಂತ್ರಿ ಸಿದ್ದರಾಮಯ್ಯ ಆ.2ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 11.30ಕ್ಕೆ ಪೊನ್ನಂಪೇಟೆ ತಾಲೂಕು ಶ್ರೀಮಂಗಲದಲ್ಲಿ ರಸ್ತೆ ಕುಸಿದಿರುವ ಪ್ರದೇಶಕ್ಕೆ ಭೇಟಿ, ಮಧ್ಯಾಹ್ನ 12.45 ಗಂಟೆಗೆ ವಿರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮದ ಬಳಿ ರಸ್ತೆ ಕುಸಿತ ಪ್ರದೇಶಕ್ಕೆ ಭೇಟಿ, ಮಧ್ಯಾಹ್ನ 1.45 ಗಂಟೆಗೆ ಸಿದ್ದಾಪುರ ಸ್ವರ್ಣಮಾಲ ಕಲ್ಯಾಣ ಮಂಟಪ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ನಂತರ ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಂಜೆ 4.30ಕ್ಕೆ ಕುಶಾಲನಗರ ತಾಲೂಕಿನ ಮಾದಾಪಟ್ಟಣ ಗ್ರಾಮಕ್ಕೆ ತೆರಳಿ ಮನೆ ಕುಸಿದಿರುವ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೂಡ ಆಗಮಿಸಿದ್ದಾರೆ.
ಬೆಳೆ ನಷ್ಟ ಈ ಬಾರಿ ನಿರೀಕ್ಷೆಯನ್ನು ಮೀರಿಸಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಮುಖ್ಯಮಂತ್ರಿಗಳು ಬೆಳೆ ನಷ್ಟದ ಬಗ್ಗೆ ತಕ್ಷಣ ಕ್ರಮಕೈಕೊಂಡು ಪರಿಹಾರ ಕಲ್ಪಿಸುವುದು, ಪರಿಹಾರ ಮೊತ್ತ ಹೆಚ್ಚಿಸಲು ಮುಂದಾಗಬೇಕಿದೆ.
– ಮನು ಸೋಮಯ್ಯ, ಅಧ್ಯಕ್ಷರು, ರೈತ ಸಂಘ, ಕೊಡಗು
ಫೋಟೋ 1 ಎಂಡಿಕೆ 05 ; ಪಲ್ಲೇರಿ ಗ್ರಾಮದಲ್ಲಿ ಕಾಫಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿರುವುದು
06 ; ಮನು ಸೋಮಯ್ಯ
07 ; ನೆಲಕಚ್ಚಿರುವ ಕಾಫಿ ಬೆಳೆ