ಚಾಮರಾಜನಗರ, ಜ 14: ಅದು ದೇಶದ ಪ್ರಸಿದ್ದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ. ಈ ಅರಣ್ಯ ವ್ಯಾಪ್ತಿಯಲ್ಲಿ ಸಾಕಷ್ಟು ಕಾಡಂಚಿನ ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ಅನಾರೋಗ್ಯಕ್ಕೆ ತುತ್ತಾದರೇ ಜನರ ಪಾಡು ಮಾತ್ರ ಹೇಳತೀರದಾಗಿತ್ತು. ಇದೀಗ ಈ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಆಂಬ್ಯುಲೆನ್ಸ್ ಸೌಲಭ್ಯ ಒದಗಿಸುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ದೇಶದ ಪ್ರತಿಷ್ಠಿತ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ. ಬಂಡೀಪುರ ಹುಲಿಸಂರಕ್ಷಿತ ಪ್ರದೇಶವಾಗಿ 50 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಕಾಡು ಹಾಗೂ ಕಾಡಂಚಿನ ಜನರ ರಕ್ಷಣೆಗಾಗಿ ಹಾಗೂ ಅವರಿಗೆ ಆರೋಗ್ಯ ಸೌಲಭ್ಯ ಒದಗಿಸಲು ಅರಣ್ಯ ಇಲಾಖೆ ಅನೇಕ ಯೋಜನೆ ರೂಪಿಸಿದೆ. ಬಂಡೀಪುರದ ಕಾಡಂಚಿನ ಗ್ರಾಮಗಳಾದ ಮಂಗಲ, ಎಕೆಚೆಟ್ಟಿ, ಜಕ್ಕಳ್ಳಿ, ಮದ್ದೂರು ಕಾಲೋನಿ ಸೇರಿದಂತೆ 20 ಕ್ಕೂ ಹೆಚ್ಚು ಗ್ರಾಮಗಳು ಬಂಡೀಪುರದ ಕಾಡಂಚಿಗೆ ಹೊಂದಿಕೊಂಡಿವೆ. ಈ ಗ್ರಾಮದ ಜನರು ಅನಾರೋಗ್ಯಕ್ಕೆ ತುತ್ತಾದರೇ ವಾಹನ ಸೌಲಭ್ಯವಿಲ್ಲದೇ ಆಸ್ಪತ್ರೆಗೆ ತೆರಳಲು ಪರದಾಡುತ್ತಿದ್ದರು. ಬಹಳ ವರ್ಷಗಳಿಂದಲೂ ಕೂಡ ಕಾಡಂಚಿನ ಜನರ ನೆರವಿಗೆ ಧಾವಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಬಂದರು ಪ್ರಯೋಜನವಾಗಿರಲಿಲ್ಲ. ಇದೀಗಾ ಕಾಡಂಚಿನ ಜನರಿಗೆ ತುರ್ತು ಆರೋಗ್ಯ ಸೇವೆಗಾಗಿ ಬಂಡೀಪುರದ ಅರಣ್ಯಾಧಿಕಾರಿಗಳು ಎರಡು ಆಂಬ್ಯುಲೆನ್ಸ್ ಸೇವೆ ಆರಂಭಿಸಿದ್ದಾರೆ.