ಪ್ರತಿನಿಧಿ ವರದಿ ಮೈಸೂರು
ಸಾಹಿತ್ಯ ನೆಲೆ ಇಲ್ಲದೇ ಒಳ್ಳೆಯ ಕಲಾವಿದನಾಗಲು ಸಾಧ್ಯವಿಲ್ಲ ಎಂದು ರಂಗಭೂಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್ ಹೇಳಿದರು.
ನಿರಂತರ ಫೌಂಡೇಷನ್, ಪೃಥ್ವಿ ಟ್ರಸ್ಟ್, ಕಲಾಸುರಚಿ ವತಿಯಿಂದ ಕುವೆಂಪುನಗರದ ಚಿತ್ರಭಾನು ರಸ್ತೆಯ ಸುರಚಿ ರಂಗಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಮೇಶ್ ತೆಂಕನಹಳ್ಳಿ ಅವರ ‘ಕಪ್ಪು ಹಲ್ಲಿನ ಕಥೆ’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ಸಾಹಿತ್ಯ ಎಂಬುದು ಜೀವಸೆಲೆ. ದೇಶ ಸುತ್ತು-ಕೋಶ ಓದು ಎಂಬ ಗಾದೆ ಮಾತಿದೆ. ನಟರಾದವರು ದೇಶವನ್ನು ಸುತ್ತಬೇಕು. ಕೋಶವನ್ನು ಓದಬೇಕು. ಆಗ ಮಾತ್ರ ಜ್ಞಾನಾರ್ಜನೆ ಸಾಧ್ಯ ಎಂದರು.
ಕಲಾವಿದರಿಗೆ ಸೂಕ್ಷ್ಮಗ್ರಹಿಕೆ, ಸಾಹಿತ್ಯ, ಸಂಗೀತದ ನೆಲೆಗಟ್ಟು ಕೂಡಬೇಕು. ಕೆ.ವಿ.ಸುಬ್ಬಣ್ಣ, ತೇಜಸ್ವಿ ಅವರು ಏನು ಬೇಕಾದರೂ ಆಗಬಹುದಿತ್ತು. ಆದರೆ ಹಳ್ಳಿಗೆ ಹಿಂತಿರುಗಿ ಅದ್ಭುತ ಸಾಧನೆ ಮಾಡಿದರು. ನಟ-ನಟಿಯರಲ್ಲಿ ಕೌಶಲ್ಯದ ಜತೆಗೆ ಧಮ್ ಕೂಡ ಬೇಕು. ಅರ್ಥಾತ್ ಧಮ್ ಕಟ್ಟಿ ಕೆಲಸ ಮಾಡಬೇಕು. ಪ್ರಸ್ತುತ ನಟ-ನಟಿಯರು ಇದ್ದಾರೆ. ಆದರೆ ತಂಡವನ್ನು ಮುನ್ನಡೆಸುವ ಸಂಘಟಕರ ಕೊರತೆ ಇದೆ. ಆದರೆ ಉಮೇಶ್ ತೆಂಕನಹಳ್ಳಿ ಅವರು ರಂಗಕರ್ಮಿ, ಸಾಹಿತಿ, ಸಂಘಟಕ ಎಲ್ಲವೂ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ಮಂಡ್ಯ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜ್ ಮಾತನಾಡಿ, ಈ ಕಾದಂಬರಿಯನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಇದಕ್ಕೆ ಅಲ್ಲಿ ಬರುವ ಡೈಲಾಗ್ಗಳು ಮುಖ್ಯ ಕಾರಣ. ಇದೊಂದು ರೀತಿಯಲ್ಲಿ ಬಯಲು ಸೀಮೆಯ ಅನುಭವವನ್ನು ಕಟ್ಟಿಕೊಡುತ್ತದೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಇಡೀ ಕಾದಂಬರಿಯಲ್ಲಿ ಗ್ರಾಮೀಣ ಸೊಗಡು ಮೇಳೈಸಿದೆ. ಹಿಂದಿನ ಕಾಲದ ಬಳೆಗಾರರು, ಮಡಿಕೆ ಮಾರಾಟಗಾರರಿಂದ ಹಿಡಿದು ಇಡೀ ಹಳ್ಲಿಯ ಚಿತ್ರಣವನ್ನು ಇಲ್ಲಿ ಕಾಣಬಹುದು. ಜೊತೆಗೆ ಹಿಂದೆ ಸಿಸಿ ಟಿವಿ ಕ್ಯಾಮರಾಗಳಂತೆ ಕಾರ್ಯನಿರ್ವಹಿಸುತ್ತಿದ್ದ ಊರಿನ ಅಜ್ಜಿಯಂದಿರ ಪ್ರಕರಣವನ್ನು ಉಮೇಶ್ ಹಾಸ್ಯಮಯವಾಗಿ ನಿರೂಪಿಸಿದ್ದಾರೆ ಎಂದರು.
ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ.ಚ.ಸರ್ಮಂಗಳಾ ಬಾಯಿ, ರಂಗಕರ್ಮಿ ಅರಸೀಕೆರೆ ಯೋಗಾನಂದ, ಕುಂದೂರು ಪ್ರಸಾದ್, ಕಲಾಸುರಚಿ ಕೆ. ನಾಗರಾಜ್, ನಿರಂತರ ಶ್ರೀನಿವಾಸ್, ಮೀನಾ ಮೈಸೂರು, ನಾ. ನಾಗಚಂದ್ರ ಇತರರಿದ್ದರು.
=================